ಕೇಂದ್ರ ಗೃಹ ಸಚಿವಾಲಯವು ‘ಶಹಜಾದ್ ಭಟ್ಟಿ ನೆಟ್ವರ್ಕ್’ (SBN) ಅನ್ನು ಭಯೋತ್ಪಾದಕ ಸಂಘಟನೆ ಎಂದು ಅಧಿಕೃತವಾಗಿ ಘೋಷಿಸಿ, ತಕ್ಷಣದಿಂದಲೇ ಜಾರಿಗೆ ಬರುವಂತೆ ನಿಷೇಧಿಸಿದೆ. ಪಾಕಿಸ್ತಾನದಿಂದ ಸಕ್ರಿಯವಾಗಿರುವ ಈ ಜಾಲವು ದೇಶದ ಆಂತರಿಕ ಭದ್ರತೆ, ಕೋಮು ಸೌಹಾರ್ದತೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿ ಪರಿಣಮಿಸಿದೆ ಎಂದು ಗೃಹ ಸಚಿವಾಲಯ ಹೊರಡಿಸಿರುವ ರಾಜಪತ್ರದ (Gazette) ಅಧಿಸೂಚನೆಯಲ್ಲಿ ತಿಳಿಸಲಾಗಿದೆ. 1967ರ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಯಡಿ ನಿಷೇಧಕ್ಕೊಳಗಾದ ಸಂಸ್ಥೆಗಳ ಪಟ್ಟಿಯಲ್ಲಿ ಈ ಜಾಲವನ್ನು 46ನೇ ಉಗ್ರ ಸಂಘಟನೆಯಾಗಿ ಸೇರ್ಪಡೆಗೊಳಿಸಲಾಗಿದೆ.
ಈ ನಿಷೇಧದ ನಿರ್ಧಾರಕ್ಕೂ ಮುನ್ನ, ಇತ್ತೀಚೆಗೆ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು ದೇಶದ 14 ರಾಜ್ಯಗಳಲ್ಲಿ ಕೇಂದ್ರ ತನಿಖಾ ಸಂಸ್ಥೆಗಳು ಮತ್ತು ವಿವಿಧ ರಾಜ್ಯಗಳ ಪೊಲೀಸರು ನಡೆಸಿದ ಬೃಹತ್ ಜಂಟಿ ಕಾರ್ಯಾಚರಣೆಯಲ್ಲಿ ಕರ್ನಾಟಕವೂ ಸೇರಿದಂತೆ 250ಕ್ಕೂ ಹೆಚ್ಚು ಶಂಕಿತರನ್ನು ವಶಕ್ಕೆ ಪಡೆಯಲಾಗಿತ್ತು. ಗಡಿಯಾಚಿನಿಂದ ಡ್ರೋನ್ ಮೂಲಕ ಶಸ್ತ್ರಾಸ್ತ್ರ, ಸ್ಫೋಟಕ ಸಾಮಗ್ರಿ ಮತ್ತು ಮಾದಕ ದ್ರವ್ಯಗಳನ್ನು ಭಾರತಕ್ಕೆ ತರಿಸಿ, ಸ್ಥಳೀಯ ಯುವಕರನ್ನು ಬಳಸಿಕೊಂಡು ಈ ನೆಟ್ವರ್ಕ್ ತನಗೆ ಬೇಕಾದ ಹಿಂಸಾತ್ಮಕ ಕೃತ್ಯಗಳನ್ನು ನಡೆಸುತ್ತಿತ್ತು ಎಂದು ಭದ್ರತಾ ಪಡೆಗಳ ವರದಿಗಳು ಸ್ಪಷ್ಟಪಡಿಸಿವೆ.
ಸೋಷಿಯಲ್ ಮೀಡಿಯಾ ಮೂಲಕ ಆರ್ಥಿಕವಾಗಿ ಹಿಂದುಳಿದ ಹಾಗೂ ಹಾದಿತಪ್ಪಿದ ಯುವಕರಿಗೆ ಹಣದ ಆಮಿಷ ಒಡ್ಡಿ ಉಗ್ರವಾದದತ್ತ ಸೆಳೆಯುವುದು ಈ ಜಾಲದ ಪ್ರಮುಖ ತಂತ್ರವಾಗಿತ್ತು. ಪೊಲೀಸ್ ಠಾಣೆಗಳು, ಸೇನಾ ನೆಲೆಗಳು ಹಾಗೂ ಪ್ರಮುಖ ಧಾರ್ಮಿಕ ಸ್ಥಳಗಳ ಬಳಿ ಗೂಢಚರ್ಯೆ ನಡೆಸಲು ಮತ್ತು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಸ್ಥಳೀಯರಿಗೆ ಹಣ ನೀಡಿ ಕೃತ್ಯ ಎಸಗಲಾಗುತ್ತಿತ್ತು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ. ಪಂಜಾಬ್ನ ಗ್ರೆನೇಡ್ ಹಾಗೂ ಐಇಡಿ ದಾಳಿಗಳು ಮತ್ತು ವಿವಿಧೆಡೆ ನಡೆದ ಪ್ರಚೋದನಾಕಾರಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
200ಕ್ಕೂ ಹೆಚ್ಚು ಶಂಕಿತರ ಬಂಧನದ ಬೆನ್ನಲ್ಲೇ ‘ಶಹಜಾದ್ ಭಟ್ಟಿ ನೆಟ್ವರ್ಕ್’ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದ ಗೃಹ ಸಚಿವಾಲಯ
ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆ ಸ್ಥಾನಮಾನ ನೀಡಲು ಸರ್ಕಾರದ ಸಿದ್ಧತೆ: ಸೂಚನೆ ನೀಡಿದ ಸಚಿವ ಶಿವರಾಜ್ ತಂಗಡಗಿ
ರಾಜಸ್ಥಾನ ಸ್ಥಳೀಯ ಚುನಾವಣೆ: ಬಿಜೆಪಿ ಅಭ್ಯರ್ಥಿಗೆ ಬಿದ್ದಿದ್ದು ಒಂದೇ ಮತ; ವಾರ್ಡ್ನಲ್ಲಿ ಸ್ವಪಕ್ಷದ ಕಾರ್ಯಕರ್ತರೂ ಕೈಬಿಟ್ಟರಾ?
‘ದೇಶ ನಿಮಗೇನು ಮಾಡಿದೆ ಎಂದು ಕೇಳುವ ಬದಲು, ದೇಶಕ್ಕೆ ನಿಮ್ಮ ಕೊಡುಗೆ ಏನು ಎಂಬುದರತ್ತ ಗಮನಹರಿಸಿ’ : ಯುವಜನತೆಗೆ ನಿರ್ಮಲಾ ಸೀತಾರಾಮನ್ ಸಲಹೆ
ಯೆಮನ್ನಲ್ಲಿ ತೀವ್ರಗೊಂಡ ಸಂಘರ್ಷ: 14 ದಿನಗಳಲ್ಲಿ 57,000 ಮಕ್ಕಳು ಬೀದಿಗೆ, ಕನಿಷ್ಠ 9 ಮಕ್ಕಳ ಬಲಿ ಎಂದ ಯೂನಿಸೆಫ್!
‘ಅಸ್ಸಲಾಮು ಅಲೈಕುಮ್’, ‘ಇನ್ಶಾ ಅಲ್ಲಾಹ್’ ಎಂದಿದ್ದಕ್ಕೆ ಕ್ರಮ?: ಹಿಂದೂ ಸಂಘಟನೆಯ ದೂರಿನ ಬೆನ್ನಲ್ಲೇ ಐಪಿಎಸ್ ಅಧಿಕಾರಿ ಬುಷ್ರಾ ಬಾನೋ ವರ್ಗಾವಣೆ
ಸ್ವಇಚ್ಛೆಯಿಂದ ಇಸ್ಲಾಂ ಸ್ವೀಕರಿಸಿದೆ ಎಂದ ಆಯುಷ್ ಮಲಿಕ್: 31 ವರ್ಷದ ಯುವಕನನ್ನು ತಂದೆಯ ಅಕ್ರಮ ವಶದಿಂದ ಮುಕ್ತಗೊಳಿಸಿದ ಅಲಹಾಬಾದ್ ಹೈಕೋರ್ಟ್

ಯುಎಪಿಎ ಕಾಯ್ದೆಯಡಿ ಅಧಿಕೃತ ನಿಷೇಧ ಹೇರಿರುವುದರಿಂದ, ಪ್ರಸ್ತುತ ಬಂಧನಕ್ಕೊಳಗಾಗಿರುವವರ ವಿರುದ್ಧ ಕಾನೂನು ಪ್ರಕ್ರಿಯೆಗಳು ಬಿಗಿಗೊಳ್ಳಲಿವೆ. ಇದರ ಜೊತೆಗೆ ಈ ನೆಟ್ವರ್ಕ್ ಹೊಂದಿರುವ ಬೇನಾಮಿ ಆಸ್ತಿಪಾಸ್ತಿಗಳು, ಬ್ಯಾಂಕ್ ಖಾತೆಗಳು ಹಾಗೂ ಆನ್ಲೈನ್ ಮಾಧ್ಯಮಗಳಲ್ಲಿ ಕಾರ್ಯಾಚರಿಸುತ್ತಿರುವ ಜಾಲವನ್ನು ಜಪ್ತಿ ಮಾಡಲು ಮತ್ತು ಸಂಪೂರ್ಣವಾಗಿ ಮುಟ್ಟುಗೋಲು ಹಾಕಿಕೊಳ್ಳಲು ತನಿಖಾ ಸಂಸ್ಥೆಗಳಿಗೆ ಪೂರ್ಣ ಕಾನೂನಾತ್ಮಕ ಅಧಿಕಾರ ದೊರೆತಂತಾಗಿದೆ.
