ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದಲ್ಲಿದ್ದ ಮಂಗಳೂರು ರೈಲ್ವೆ ವಲಯವನ್ನು (ಉಳ್ಳಾಲದವರೆಗೆ) ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಲು ರೈಲ್ವೆ ಮಂಡಳಿ ತೆಗೆದುಕೊಂಡಿರುವ ಏಕಪಕ್ಷೀಯ ತೀರ್ಮಾನವನ್ನು ತಕ್ಷಣವೇ ತಡೆಹಿಡಿಯಬೇಕು ಮತ್ತು ಮರುಪರಿಶೀಲಿಸಬೇಕು ಎಂದು ಆಗ್ರಹಿಸಿ ಕೇರಳ ಮುಖ್ಯಮಂತ್ರಿ ವಿ. ಡಿ. ಸತೀಶನ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ವಿವರವಾದ ಪತ್ರ ಬರೆದಿದ್ದಾರೆ. ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿರುವ ಅವರು, ಕೇರಳ ಸರ್ಕಾರದೊಂದಿಗೆ ಯಾವುದೇ ಸಮಾಲೋಚನೆ ನಡೆಸದೆ ರೈಲ್ವೇ ಸಚಿವಾಲಯ ಈ ಕ್ರಮ ಕೈಗೊಂಡಿರುವುದಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ.
ಪಾಲಕ್ಕಾಡ್ ವಿಭಾಗದ ಶೇಕಡಾ 90ಕ್ಕಿಂತಲೂ ಹೆಚ್ಚಿನ ಸರಕು ಸಾಗಣೆ ಆದಾಯ ಮಂಗಳೂರು ವ್ಯಾಪ್ತಿಯಿಂದಲೇ ಬರುತ್ತಿತ್ತು. ಪಣಂಬೂರಿನಂತಹ ಪ್ರಮುಖ ಸರಕು ಕೇಂದ್ರವನ್ನು ಪಾಲಕ್ಕಾಡ್ ವಿಭಾಗದಿಂದ ಕೈಬಿಟ್ಟರೆ, ಆ ವಿಭಾಗವು ಆರ್ಥಿಕವಾಗಿ ತೀವ್ರ ದುರ್ಬಲಗೊಳ್ಳಲಿದೆ ಎಂದು ಸತೀಶನ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದರಿಂದಾಗಿ ಮಲಬಾರ್ ಪ್ರದೇಶದ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ, ಹೊಸ ರೈಲುಗಳ ಮಂಜೂರಾತಿ ಹಾಗೂ ಪ್ರಯಾಣಿಕರ ಸೌಲಭ್ಯಗಳಿಗೆ ಭವಿಷ್ಯದಲ್ಲಿ ಭಾರಿ ಹಿನ್ನಡೆಯಾಗಲಿದೆ ಎಂದು ಕೇರಳ ಸರ್ಕಾರ ಪ್ರತಿಪಾದಿಸಿದೆ.
ಮತ್ತೊಂದೆಡೆ, ಕರಾವಳಿ ಕರ್ನಾಟಕದ ರೈಲ್ವೆ ಪ್ರಯಾಣಿಕರು ಹಾಗೂ ಹೋರಾಟಗಾರರು ಈ ಬದಲಾವಣೆಯನ್ನು ದಶಕಗಳ ಸುದೀರ್ಘ ಹೋರಾಟದ ಗೆಲುವು ಎಂದು ಪರಿಗಣಿಸಿದ್ದಾರೆ. ಮಂಗಳೂರು ವಲಯವು ಪಾಲಕ್ಕಾಡ್ ವಿಭಾಗದಲ್ಲಿದ್ದ ಕಾರಣ ಕರಾವಳಿ ಭಾಗದಿಂದ ಬರುವ ಭಾರಿ ಆದಾಯವನ್ನು ನೆರೆಯ ರಾಜ್ಯದ ರೈಲ್ವೆ ಯೋಜನೆಗಳಿಗೆ ಬಳಸಲಾಗುತ್ತಿತ್ತು ಮತ್ತು ಕರ್ನಾಟಕದ ಕರಾವಳಿಯ ರೈಲ್ವೆ ಅಭಿವೃದ್ಧಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿತ್ತು ಎಂಬುದು ಸ್ಥಳೀಯರ ಸುದೀರ್ಘ ಆಕ್ಷೇಪವಾಗಿತ್ತು. ಮೈಸೂರು ವಿಭಾಗಕ್ಕೆ (ನೈಋತ್ಯ ರೈಲ್ವೆ) ಸೇರ್ಪಡೆಯಾಗುವುದರಿಂದ ರಾಜ್ಯದ ಒಳನಾಡಿನೊಂದಿಗೆ ಕರಾವಳಿಯ ಸಂಪರ್ಕ ಉತ್ತಮಗೊಂಡು ವಲಯದ ಅಭಿವೃದ್ಧಿಗೆ ವೇಗ ಸಿಗಲಿದೆ ಎಂಬುದು ಕರಾವಳಿ ಕನ್ನಡಿಗರ ನಿಲುವು.
ಈ ಹಿಂದೆ 2007ರಲ್ಲಿ ಸೇಲಂ ವಿಭಾಗದ ರಚನೆಯ ಸಂದರ್ಭದಲ್ಲೂ ಪಾಲಕ್ಕಾಡ್ ವಿಭಾಗವು ತನ್ನ ಪ್ರಮುಖ ವ್ಯಾಪ್ತಿಯನ್ನು ಕಳೆದುಕೊಂಡಿತ್ತು. ಈಗ ಮಂಗಳೂರನ್ನೂ ಪ್ರತ್ಯೇಕಿಸಿದರೆ ದೇಶದ ಅತ್ಯಂತ ಹಳೆಯ ರೈಲ್ವೆ ವಿಭಾಗಗಳಲ್ಲೊಂದಾದ ಪಾಲಕ್ಕಾಡ್ನ ಅಸ್ತಿತ್ವಕ್ಕೆ ಧಕ್ಕೆಯಾಗಲಿದೆ ಎಂದು ಕೇರಳ ನಾಯಕರು ವಾದಿಸುತ್ತಿದ್ದಾರೆ. ಹೀಗಾಗಿ, ಪ್ರಸ್ತುತ ವರ್ಗಾವಣೆ ಆದೇಶವನ್ನು ತಕ್ಷಣವೇ ಸ್ಥಗಿತಗೊಳಿಸಿ, ಕೇರಳ ಸರ್ಕಾರದೊಂದಿಗೆ ಸಮಾಲೋಚನೆ ನಡೆಸುವಂತೆ ಪ್ರಧಾನಿ ಮೋದಿ ಮತ್ತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಸತೀಶನ್ ಮನವಿ ಮಾಡಿದ್ದಾರೆ.
