ವಿಪಕ್ಷಗಳನ್ನು ಅಣಕಿಸುವ ಭರದಲ್ಲಿ ಧಾರ್ಮಿಕ ಭಕ್ತಿಗೀತೆ ‘ಜೈ ಗಣೇಶ’ ಆರತಿಯನ್ನು ವಿಡಂಬನಾತ್ಮಕವಾಗಿ ಬಳಸಿ ತಯಾರಿಸಲಾಗಿದ್ದ ವಿಡಿಯೋ ಒಂದನ್ನು ರಾಜಸ್ಥಾನ ಬಿಜೆಪಿಯ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಳ್ಳಲಾಗಿತ್ತು. ಆದರೆ, ಈ ನಡೆಗೆ ಜಾಲತಾಣಗಳಲ್ಲಿ ವ್ಯಾಪಕ ಆಕ್ಷೇಪ ಮತ್ತು ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಬಿಜೆಪಿ ಆ ವಿಡಿಯೋವನ್ನು ತನ್ನ ಅಧಿಕೃತ ‘ಎಕ್ಸ್’ (ಟ್ವಿಟರ್) ಹಾಗೂ ಫೇಸ್ಬುಕ್ ಪುಟಗಳಿಂದ ಡಿಲೀಟ್ ಮಾಡಿದೆ.
ಆಲ್ಟ್ ನ್ಯೂಸ್ ಸಂಸ್ಥಾಪಕ ಮಹಮ್ಮದ್ ಝುಬೇರ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣ ಬಳಕೆದಾರರು ಈ ವಿಚಾರವನ್ನು ಸಾರ್ವಜನಿಕವಾಗಿ ಎತ್ತಿ ತೋರಿಸಿದ್ದಾರೆ. ರಾಜಸ್ಥಾನ ಬಿಜೆಪಿಯ ಅಧಿಕೃತ ಖಾತೆಯಲ್ಲಿ (@BJP4Rajasthan) ವಿಪಕ್ಷಗಳ ನಾಯಕರನ್ನು ಅಣಕ ಮಾಡಲು ಹಿನ್ನೆಲೆಯಲ್ಲಿ ಪವಿತ್ರ ಗಣೇಶ ಆರತಿಯನ್ನು ಬಳಸಿ ಈ ವಿಡಿಯೋ ರೂಪಿಸಲಾಗಿತ್ತು. ರಾಜಕೀಯ ವಾಕ್ಸಮರಕ್ಕೆ ಪವಿತ್ರ ಧಾರ್ಮಿಕ ಗೀತೆಗಳನ್ನು ಬಳಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಗಳು ಎದ್ದಿದ್ದವು.
ಈ ಕುರಿತು ಧ್ವನಿ ಎತ್ತಿದ ನೆಟ್ಟಿಗರು ಹಾಗೂ ವಿಶ್ಲೇಷಕರು, ಇದೇ ರೀತಿಯ ವಿಡಿಯೋವನ್ನು ಯಾವುದೇ ವಿರೋಧ ಪಕ್ಷದ ನಾಯಕರು ಅಥವಾ ಸಾಮಾಜಿಕ ಜಾಲತಾಣ ಖಾತೆಗಳು ಹಂಚಿಕೊಂಡಿದ್ದರೆ, ಅವರನ್ನು ಧರ್ಮವಿರೋಧಿ ಎಂದು ಬಿಂಬಿಸಿ ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಗಂಟೆಗಟ್ಟಲೆ ಚರ್ಚೆಗಳು ನಡೆಯುತ್ತಿದ್ದವು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಡಳಿತ ಪಕ್ಷವು ರಾಜಕೀಯ ಲಾಭಕ್ಕಾಗಿ ಧಾರ್ಮಿಕ ಭಾವನೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ಹೆಚ್ಚಾಗುತ್ತಿದ್ದಂತೆ, ರಾಜಸ್ಥಾನ ಬಿಜೆಪಿ ಘಟಕವು ವಿಡಿಯೋವನ್ನು ಎಕ್ಸ್ ಹಾಗೂ ಫೇಸ್ಬುಕ್ನಿಂದ ಯಾವುದೇ ಅಧಿಕೃತ ವಿವರಣೆ ನೀಡದೆ ತೆಗೆದುಹಾಕಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿ ಅಧಿಕೃತವಾಗಿ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡದಿದ್ದರೂ, ಜಾಲತಾಣಗಳಲ್ಲಿ ಈ ವಿಡಿಯೋದ ಸ್ಕ್ರೀನ್ಶಾಟ್ಗಳು ಹಾಗೂ ಪೋಸ್ಟ್ಗಳು ಹರಿದಾಡುತ್ತಿವೆ.
