ಸಾಮಾಜಿಕ ತಾಣ

ಇನ್‌ಸ್ಟಾಗ್ರಾಮ್‌ನಲ್ಲಿ ಮಕ್ಕಳ ಲೈಂಗಿಕ ದೌರ್ಜನ್ಯದ ದೃಶ್ಯಗಳ ಜಾಹೀರಾತು; ಮೆಟಾ ಬೇಜವಾಬ್ದಾರಿತನ ಬಯಲಿಗೆಳೆದ ಬಿಬಿಸಿ ತನಿಖಾ ವರದಿ

Reading…
Follow Us

ಸಾರಾಂಶ

ಭಾರತದಲ್ಲಿ ಇನ್‌ಸ್ಟಾಗ್ರಾಮ್ ಮಕ್ಕಳ ಲೈಂಗಿಕ ದೌರ್ಜನ್ಯದ ದೃಶ್ಯಗಳನ್ನು ಉತ್ತೇಜಿಸುವ ಜಾಹೀರಾತುಗಳನ್ನು (Paid Ads) ಪ್ರದರ್ಶಿಸುತ್ತಿರುವುದನ್ನು ಬಿಬಿಸಿ ವರದಿಗಾರ್ತಿ ದಿವ್ಯಾ ಆರ್ಯ ಅವರ ತನಿಖಾ ವರದಿ ಬಯಲಿಗೆಳೆದಿದೆ. ಕೇವಲ 99 ರೂ.ಗೆ ಇಂತಹ ಆಕ್ಷೇಪಾರ್ಹ ವಿಡಿಯೋಗಳನ್ನು ಮಾರಾಟ ಮಾಡುವ ಟೆಲಿಗ್ರಾಂ ಚಾನಲ್‌ಗಳ ಲಿಂಕ್‌ಗಳು ಇನ್‌ಸ್ಟಾಗ್ರಾಮ್‌ನ ಜಾಹೀರಾತು ಪರಿಶೀಲನಾ ವ್ಯವಸ್ಥೆಯಲ್ಲೇ ಅನುಮೋದನೆ ಪಡೆದುಕೊಂಡಿರುವುದು ಮತ್ತು ಈ ಜಾಹೀರಾತುಗಳಿಂದ ಮೆಟಾಗೆ ಆದಾಯ ಹರಿದುಬಂದಿರುವುದನ್ನು ಈ ವರದಿ ಸಾಕ್ಷ್ಯಸಮೇತ ಅನಾವರಣಗೊಳಿಸಿದೆ.

ಭಾರತದಲ್ಲಿ ಇನ್‌ಸ್ಟಾಗ್ರಾಮ್ ಮಕ್ಕಳ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರದ ದೃಶ್ಯಗಳನ್ನು ಉತ್ತೇಜಿಸುವ ಜಾಹೀರಾತುಗಳನ್ನು (ಪೇಡ್ ಆಡ್ಸ್) ಪ್ರದರ್ಶಿಸುತ್ತಿದೆ ಎಂದು ಬಿಬಿಸಿ ಐ (BBC Eye) ತನಿಖಾ ವರದಿ ಬಯಲಿಗೆಳೆದಿದೆ. ಇನ್‌ಸ್ಟಾಗ್ರಾಮ್‌ನ ಜಾಹೀರಾತು ಪರಿಶೀಲನಾ ವ್ಯವಸ್ಥೆಯೇ ಇಂತಹ ಕಾನೂನುಬಾಹಿರ ಜಾಹೀರಾತುಗಳಿಗೆ ಅನುಮೋದನೆ ನೀಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಬಿಬಿಸಿ ಹಿರಿಯ ವರದಿಗಾರ್ತಿ ದಿವ್ಯಾ ಆರ್ಯ ನೇತೃತ್ವದಲ್ಲಿ ಈ ತನಿಖೆ ನಡೆದಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ತಮಗೆ ಎದುರಾದ ಕೆಲವು ಅನುಮಾನಾಸ್ಪದ ಜಾಹೀರಾತು ಬೆನ್ನತ್ತಿದ ದಿವ್ಯಾ, ಭಾರತದ ವಿಳಾಸ ಬಳಸಿ ನಕಲಿ ಖಾತೆ ತೆರೆದಿದ್ದರು. ಕೆಲವೇ ದಿನಗಳಲ್ಲಿ ಅವರ ಇನ್‌ಸ್ಟಾಗ್ರಾಮ್ ಫೀಡ್‌ನಲ್ಲಿ ಅಡಲ್ಟ್ ಕಟೆಂಟ್‌ಗಳ (Adult Content) ಜಾಹೀರಾತುಗಳು ಬರಲಾರಂಭಿಸಿದವು. ಬೆನ್ನಲ್ಲೇ, ಸಣ್ಣ ವಯಸ್ಸಿನ ಮಕ್ಕಳು ವಯಸ್ಕರೊಂದಿಗೆ ಲೈಂಗಿಕ ಪ್ರಕೃತಿಗಳಲ್ಲಿರುವಂತೆ ಬಿಂಬಿಸುವ ಆಕ್ಷೇಪಾರ್ಹ ಜಾಹೀರಾತುಗಳು ಪ್ರತ್ಯಕ್ಷವಾದವು. ಈ ಜಾಹೀರಾತುಗಳಲ್ಲಿ ‘ರೇಪ್ ವಿಡಿಯೋ’ ಮತ್ತು ‘ಚೈಲ್ಡ್ ವಿಡಿಯೋ’ ಎಂಬ ಪದಗಳನ್ನು ಮುಕ್ತವಾಗಿ ಬಳಸಲಾಗಿತ್ತು. ಕೇವಲ 99 ರೂಪಾಯಿಗಳಿಗೆ ಇಂತಹ ವಿಡಿಯೋ ಮಾರಾಟ ಮಾಡುವ ಟೆಲಿಗ್ರಾಂ ಚಾನಲ್‌ಗಳ ಲಿಂಕ್‌ಗಳನ್ನು ನೀಡಲಾಗಿತ್ತು. ತನಿಖೆಯಲ್ಲಿ ಇಂತಹ 30 ಕ್ಕೂ ಹೆಚ್ಚು ಜಾಹೀರಾತುಗಳು ಪತ್ತೆಯಾಗಿವೆ.

ಕಾನೂನು ಉಲ್ಲಂಘನೆ ಮತ್ತು ಮೆಟಾ ಲಾಭ ಗಳಿಕೆ

ಭಾರತೀಯ ಕಾನೂನಿನ ಪ್ರಕಾರ ಮಕ್ಕಳ ಲೈಂಗಿಕ ದೌರ್ಜನ್ಯದ ದೃಶ್ಯಗಳ (CSAM) ಪ್ರಸಾರ ಮತ್ತು ಹಂಚಿಕೆ ಗಂಭೀರ ಆಪರಾಧ. ಇನ್‌ಸ್ಟಾಗ್ರಾಮ್‌ನ ಸ್ವಂತ ನೀತಿಗಳು ಕೂಡ ಇಂತಹ ಕಟೆಂಟ್‌ಗಳನ್ನು ನಿಷೇಧಿಸುತ್ತವೆ. ಆದರೆ, ಮೆಟಾ ಇಂತಹ ಅಪರಾಧ ಕೃತ್ಯಗಳ ಜಾಹೀರಾತುಗಳಿಂದ ಹಣ ಗಳಿಸುತ್ತಿದೆ ಎಂಬುದು ತನಿಖೆಯಿಂದ ಸಾಬೀತಾಗಿದೆ. ಮೆಟಾ ಒಟ್ಟು ಆದಾಯದ ಶೇಕಡಾ 98 ಭಾಗ ಜಾಹೀರಾತುಗಳಿಂದಲೇ ಬರುತ್ತದೆ. ಇನ್‌ಸ್ಟಾಗ್ರಾಮ್‌ನಲ್ಲಿ ಪ್ರದರ್ಶನಗೊಳ್ಳುವ ಪ್ರತಿಯೊಂದು ಜಾಹೀರಾತಿಗೂ ಸಂಸ್ಥೆ ಹಣ ಪಡೆಯುತ್ತದೆ. ಹೀಗಾಗಿ, ಮಕ್ಕಳ ಮೇಲಿನ ದೌರ್ಜನ್ಯವನ್ನು ವ್ಯವಹಾರವಾಗಿಸಿಕೊಂಡಿರುವ ಮಾಫಿಯಾ ಇನ್‌ಸ್ಟಾಗ್ರಾಮ್‌ಗೆ ಹಣ ಪಾವತಿಸಿ ತನ್ನ ಜಾಲ ವಿಸ್ತರಿಸಿಕೊಳ್ಳುತ್ತಿದೆ.

ಫೇಸ್‌ಬುಕ್‌ನ ಮಾಜಿ ಉಪಾಧ್ಯಕ್ಷ ಬ್ರಿಯಾನ್ ಬೋಲ್ಯಾಂಡ್ ಪ್ರತಿಕ್ರಿಯಿಸಿ, “ಇನ್‌ಸ್ಟಾಗ್ರಾಮ್ ಅಲ್ಗಾರಿದಮ್‌ಗಳು (Algorithms) ಬಳಕೆದಾರರನ್ನು ಹಿಡಿದಿಟ್ಟುಕೊಳ್ಳಲು ಮತ್ತು ಹೆಚ್ಚು ಆದಾಯ ಗಳಿಸಲು ಹೆಚ್ಚು ತೀವ್ರ ಹಾಗೂ ಪ್ರಚೋದನಾತ್ಮಕ ವಿಷಯಗಳ ಕಡೆಗೆ ತಳ್ಳುತ್ತವೆ. ಬಳಕೆದಾರರ ಸುರಕ್ಷತೆಯ ಬಗ್ಗೆ ಮೆಟಾಗೆ ಕಾಳಜಿಯಿಲ್ಲ,” ಎಂದು ಆರೋಪಿಸಿದ್ದಾರೆ.

ವಿಡಿಯೋ ವೀಕ್ಷಿಸಿ

ಸುಪ್ರೀಂ ಕೋರ್ಟ್ ಹಸ್ತಕ್ಷೇಪಕ್ಕೆ ತಜ್ಞರ ಆಗ್ರಹ

ವರದಿಯ ಬೆನ್ನಲ್ಲೇ ತಜ್ಞರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮದನ್ ಲೋಕೂರ್, “ಇದು ಅತ್ಯಂತ ಗಂಭೀರ ವಿಷಯ. ಇನ್‌ಸ್ಟಾಗ್ರಾಮ್ ಕ್ರಿಮಿನಲ್ ಚಟಯುವಟಿಕೆಯಲ್ಲಿ ಭಾಗಿಯಾಗಿ ಹಣ ಗಳಿಸುತ್ತಿದೆ. ಸುಪ್ರೀಂ ಕೋರ್ಟ್ ಈ ವಿಷಯವನ್ನು ಸ್ವಯಂಪ್ರೇರಿತವಾಗಿ (ಸುಮೋಟೋ) ಕೈಗೆತ್ತಿಕೊಂಡು, ಇಂತಹ ಸಾಮಾಜಿಕ ಮಾಧ್ಯಮಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ತಮಗೆ ಜವಾಬ್ದಾರಿಯಿಲ್ಲ ಎಂದು ಹೇಳಿ ಸಾಮಾಜಿಕ ಮಾಧ್ಯಮಗಳು ನುಣುಚಿಕೊಳ್ಳಲು ಸಾಧ್ಯವಿಲ್ಲ,” ಎಂದಿದ್ದಾರೆ.

ತೆಲಂಗಾಣದ ಸೈಬರ್ ಸೆಕ್ಯೂರಿಟಿ ಬ್ಯೂರೋ ನಿರ್ದೇಶಕಿ ಶಿಖಾ ಗೋಯೆಲ್ ಅವರ ಪ್ರಕಾರ, 2025 ರಲ್ಲೇ ಭಾರತದಲ್ಲಿ ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ 1.9 ಮಿಲಿಯನ್ ದೂರುಗಳು ದಾಖಲಾಗಿವೆ. ಅಪರಾಧಿಗಳು ಇನ್‌ಸ್ಟಾಗ್ರಾಮ್ ಅನ್ನು ಜಾಹೀರಾತು ವೇದಿಕೆಯನ್ನಾಗಿ ಬಳಸಿ ಗ್ರಾಹಕರನ್ನು ಪತ್ತೆಹಚ್ಚಿ, ನಂತರ ನಿಯಂತ್ರಣ ಕಷ್ಟವಿರುವ ಟೆಲಿಗ್ರಾಂ ಆ್ಯಪ್‌ಗೆ ಕರೆದೊಯ್ಯುತ್ತಿದ್ದಾರೆ ಎಂದು ರತಿ ಫೌಂಡೇಶನ್‌ನ ಸಿದ್ಧಾರ್ಥ್ ಪಿಳ್ಳೈ ಮತ್ತು ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್‌ನ ಭುವನ್ ರಿಭು ಕಳವಳ ವ್ಯಕ್ತಪಡಿಸಿದ್ದಾರೆ.

ಮೆಟಾ ಸಮರ್ಥನೆ

ಬಿಬಿಸಿ ತಂಡ ಇಂತಹ ಜಾಹೀರಾತಿನ ವಿರುದ್ಧ ಇನ್‌ಸ್ಟಾಗ್ರಾಮ್‌ಗೆ ದೂರು ನೀಡಿದಾಗ, ಆರಂಭದಲ್ಲಿ “ಇದು ನಮ್ಮ ನಿಯಮಗಳನ್ನು (community guidelines) ಉಲ್ಲಂಘಿಸಿಲ್ಲ” ಎಂಬ ಬೇಜವಾಬ್ದಾರಿಯ ಉತ್ತರ ಬಂದಿತ್ತು. ಆದರೆ ಬಿಬಿಸಿ ಅಧಿಕೃತವಾಗಿ ಪ್ರಶ್ನೆಗಳನ್ನು ಕಳುಹಿಸಿದ ನಂತರ ಎಚ್ಚೆತ್ತ ಮೆಟಾ, ಹಲವು ಜಾಹೀರಾತುಗಳನ್ನು ಮತ್ತು ಆ ಖಾತೆಗಳನ್ನು ಅಮಾನತುಗೊಳಿಸಿದೆ. ಮುಂಬೈ ಟೆಕ್ ವೀಕ್ ಕಾರ್ಯಕ್ರಮದಲ್ಲಿ ಮೆಟಾ ಇಂಡಿಯಾ ಮುಖ್ಯಸ್ಥ ಅರುಣ್ ಶ್ರೀನಿವಾಸ್ ಅವರನ್ನು ಈ ಬಗ್ಗೆ ನೇರವಾಗಿ ಪ್ರಶ್ನಿಸಿದಾಗ ಅವರು ಉತ್ತರಿಸದೆ ನುಣುಚಿಕೊಂಡಿದ್ದಾರೆ.

ನಂತರ ಲಿಖಿತ ಹೇಳಿಕೆ ನೀಡಿರುವ ಮೆಟಾ ಸಂಸ್ಥೆ, “ಮಕ್ಕಳ ಮೇಲಿನ ದೌರ್ಜನ್ಯ ಭೀಕರ ಅಪರಾಧವಾಗಿದ್ದು, ಇದನ್ನು ತಡೆಯಲು ನಾವು ತಂತ್ರಜ್ಞಾನ ಮತ್ತು ಮಾನವ ಸಂಪನ್ಮೂಲಗಳನ್ನು ಬಳಸುತ್ತಿದ್ದೇವೆ. ನಾವು ಉದ್ದೇಶಪೂರ್ವಕವಾಗಿ ಇಂತಹ ಜಾಹೀರಾತುಗಳನ್ನು ಪ್ರದರ್ಶಿಸುತ್ತಿದ್ದೇವೆ ಎಂಬ ಆರೋಪ ಸುಳ್ಳು. ಯಾವುದೇ ವ್ಯವಸ್ಥೆ ಪರಿಪೂರ್ಣವಾಗಿರುವುದಿಲ್ಲ,” ಎಂದು ಸಮರ್ಥಿಸಿಕೊಂಡಿದೆ.

ಪ್ರಸ್ತುತ ಜುಲೈ 3, 2026 ರಂದು ಈ ತನಿಖಾ ಸಾಕ್ಷ್ಯಚಿತ್ರ ಬಿಡುಗಡೆಯಾಗಿದ್ದು ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಭಾರತ ಸರ್ಕಾರ ಅಥವಾ ನ್ಯಾಯಾಲಯಗಳು ಇನ್‌ಸ್ಟಾಗ್ರಾಮ್ ವಿರುದ್ಧ ಯಾವ ರೀತಿಯ ಕಾನೂನು ಕ್ರಮ ಜರುಗಿಸಲಿವೆ ಎಂಬುದನ್ನು ಕಾದು ನೋಡಬೇಕಿದೆ.

Join our WhatsApp Channel Get every Varadigara story instantly
How does this story make you feel?
Share:

About Us

ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ. ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'. ಬ್ರೇಕಿಂಗ್ ನ್ಯೂಸಿನ ನಾಗಾಲೋಟದ ಸ್ಪರ್ಧೆಯಲ್ಲಿ ನಾವಿಲ್ಲ!! ನಾ ಮುಂದು, ನಮ್ಮಲ್ಲೇ ಮೊದಲೆಂಬ ಯೋಚನೆ ಸುಳಿಯಲ್ಲ!! ಸುದ್ದಿ ಎಷ್ಟು ಕೊಟ್ಟಿದ್ದೇವೆ ಎನ್ನುವುದಕ್ಕಿಂತ ಏನು ಕೊಟ್ಟಿದ್ದೇವೆ ಎಂಬ ಗುಣಮಟ್ಟದ ಸಿದ್ಧಾಂತವನ್ನು ಮೈಗೂಡಿಸಿಕೊಂಡು ತೆವಳುತ್ತಾ ವರದಿಗಾರ ಸಾಗುತ್ತಿದೆ.

ನಮ್ಮ ಬಗ್ಗೆ ತಿಳಿಯಿರಿ →
Join our WhatsApp Channel Get every Varadigara story instantly
Follow Us
ಹನಿ ಸುದ್ದಿ ⚡ NEW
News Cards · Swipe to read
See All →

More Stories

ಸಾಮಾಜಿಕ ತಾಣ

AI ಎಡಿಟ್ ಮಾಡಿ ಬಿಹಾರದಲ್ಲಿ ಅಭಿವೃದ್ಧಿ ತೋರಿಸಲು ಪ್ರಯತ್ನಿಸಿದ ಬಿಜೆಪಿ; ಅಸಲಿಯತ್ತನ್ನು ಬಯಲಿಗೆಳೆದ ನೆಟ್ಟಿಗರು!

ಸಾಮಾಜಿಕ ತಾಣ

ದೇವಾಲಯದ ಬಳಿ ಬಡ ವ್ಯಾಪಾರಿಯ ಬಂಧನದ ಬೆನ್ನಲ್ಲೇ ಮುಗಿಬಿದ್ದು ಸಿಹಿ ತಿಂಡಿ ಲೂಟಿ ಮಾಡಿದ ಜನ; ಎತ್ತ ಸಾಗುತ್ತಿದೆ ನಮ್ಮ ನೈತಿಕತೆ?

ಸಾಮಾಜಿಕ ತಾಣ

CBSE ಉತ್ತರ ಪತ್ರಿಕೆ ಎಡವಟ್ಟು : ನ್ಯಾಯ ಕೇಳಿದ ದೆಹಲಿ ವಿದ್ಯಾರ್ಥಿಗೆ ‘ಪಾಕಿಸ್ತಾನಿ’ ಪಟ್ಟ ಕಟ್ಟಿದ ಟ್ರೋಲಿಗರು!

From Across Varadigara

ಕಾಣಿಸದ್ದು - ಕೇಳಿಸದ್ದು

ಅಂತರ್ಜಾತಿ ಗೆಳೆತನದ ಹಿನ್ನೆಲೆ: ದಲಿತ ವಿದ್ಯಾರ್ಥಿಯ ಕ್ರೂರ ಕೊಲೆ, ಇಬ್ಬರ ಬಂಧನ

ರಾಷ್ಟ್ರೀಯ ಸುದ್ದಿ

ರಾಮ ಮಂದಿರ ದೇಣಿಗೆ ದುರುಪಯೋಗ ಆರೋಪ: ಪ್ರಧಾನಿ ಮೋದಿ ಮೌನ ಮುರಿಯಲಿ ಎಂದು ಕಾಂಗ್ರೆಸ್ ಆಗ್ರಹ

ವಿಶೇಷ ಲೇಖನ

ದ್ವೇಷದ ಚಿತೆಗೆ ಮಾನವೀಯತೆಯ ಅಗ್ನಿಸ್ಪರ್ಶ: ಇರ್ಫಾನಾ ಇಕ್ಬಾಲ್ ಮಾನವೀಯ ಪಾಠ | ಕೇರಳದ ರಿಯಲ್ ಸ್ಟೋರಿ

ಕಾಣಿಸದ್ದು - ಕೇಳಿಸದ್ದು

ಮಧ್ಯಪ್ರದೇಶ: ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬೆನ್ನಲ್ಲೇ ಕಣ್ಣಿನ ದೃಷ್ಟಿ ಕಳೆದುಕೊಂಡ 19 ತಿಂಗಳ ಮಗು; ತನಿಖೆಗೆ ಆದೇಶ

ರಾಷ್ಟ್ರೀಯ ಸುದ್ದಿ

“ವೋಟ್ ಚೋರಿ, ಸರ್ಕಾರ ಚೋರಿ ನಂತರ ಇದೀಗ ಸೀಟ್ ಚೋರಿ; BJP – EC ಜುಗಲ್‌ಬಂದಿ” – ರಾಹುಲ್ ಗಾಂಧಿ

ಅಂತಾರಾಷ್ಟ್ರೀಯ

ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತದ ಹೊಸ ಆದೇಶ: ಸರ್ಕಾರಿ ನೌಕರರು ಮತ್ತು ಸೇನಾಧಿಕಾರಿಗಳಿಗೆ ಸ್ಮಾರ್ಟ್‌ಫೋನ್ ಬಳಕೆ ನಿಷೇಧ

ರಾಷ್ಟ್ರೀಯ ಸುದ್ದಿ

ಗುಂಪುಹತ್ಯೆ ಪ್ರಕರಣದಲ್ಲಿ 14 ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಧೀಶೆ ತಬಸ್ಸುಮ್ ಖಾನ್ ಗೆ ಜೀವ ಬೆದರಿಕೆ

ರಾಜ್ಯ ಸುದ್ದಿ

ಪ್ರದೀಪ್ ಈಶ್ವರ್ ಎದೆಗುಂದಬೇಕಿಲ್ಲ, ಅವರ ಜೊತೆ ಕಾಂಗ್ರೆಸ್‌ ಪಕ್ಷ ದೃಢವಾಗಿ ನಿಂತಿದೆ; ಬಿ.ಕೆ. ಹರಿಪ್ರಸಾದ್

ಕಾಣಿಸದ್ದು - ಕೇಳಿಸದ್ದು

ರಾಜಸ್ಥಾನ: ಪ್ರಧಾನಿ ಮೋದಿ ಮುಖವಾಡ ಧರಿಸಿ ಮೊಬೈಲ್ ಅಂಗಡಿ ಲೂಟಿ ಮಾಡಿದ ಕಳ್ಳ; 5 ಲಕ್ಷ ಮೌಲ್ಯದ ಮೊಬೈಲ್ ಕಳವು!

ರಾಷ್ಟ್ರೀಯ ಸುದ್ದಿ

ಬೆಲೆ ಏರಿಕೆ ಬಿಸಿ: 16 ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದ ಚಿಲ್ಲರೆ ಹಣದುಬ್ಬರ