ವರದಿಗಾರ – ಮೇ 20
ಹೊಸದಿಲ್ಲಿ: NEET ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ Central Bureau of Investigation (ಸಿಬಿಐ), ಮಹಾರಾಷ್ಟ್ರದ ನಾಗ್ಪುರ ಹಾಗೂ ಚಂದ್ರಪುರದಲ್ಲಿ ಮೂವರು ವಿದ್ಯಾರ್ಥಿಗಳ ನಿವಾಸಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ.
ತನಿಖೆಯ ಭಾಗವಾಗಿ ಲಾತೂರ್ನ ತರಬೇತಿ ಕೇಂದ್ರದ ನಿರ್ದೇಶಕನನ್ನು ವಶಕ್ಕೆ ಪಡೆದಿರುವ ಸಿಬಿಐ, ಸುಮಾರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆಗಳನ್ನು ಖರೀದಿಸಿರುವ ಶಂಕೆ ವ್ಯಕ್ತಪಡಿಸಿದೆ. ಲಾತೂರ್ನ ‘RCC Classes’ ನಿರ್ದೇಶಕ ಪ್ರೊ. ಶಿವರಾಜ್ ಮೋಟೆಗಾಂವ್ಕರ್ ಅವರನ್ನು ಸಿಬಿಐ ವಿಚಾರಣೆಗಾಗಿ ವಶಕ್ಕೆ ಪಡೆದಿದೆ ಎಂದು ತಿಳಿದುಬಂದಿದೆ.
NEET ಪರೀಕ್ಷೆಯ ಜೀವಶಾಸ್ತ್ರ ಮತ್ತು ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆಗಳ ಸೋರಿಕೆ ಸಂಬಂಧ ಸಿಬಿಐನ ಆರ್ಥಿಕ ಅಪರಾಧ ವಿಭಾಗ ದೆಹಲಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದೆ. ನಾಗ್ಪುರದಲ್ಲಿನ ಕೆಲವು ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಗಳ ಆಧಾರದಲ್ಲಿ ತನಿಖೆ ವಿಸ್ತರಿಸಲಾಗಿದ್ದು, ಎರಡು ತಂಡಗಳು ಸ್ಥಳೀಯವಾಗಿ ಶೋಧ ಕಾರ್ಯಾಚರಣೆ ನಡೆಸಿವೆ.
ನಾಗ್ಪುರದಲ್ಲಿನ ಇಬ್ಬರು ವಿದ್ಯಾರ್ಥಿಗಳು ಹಾಗೂ ಚಂದ್ರಪುರ ಜಿಲ್ಲೆಯ ಬ್ರಹ್ಮಪುರಿಯ ಓರ್ವ ವಿದ್ಯಾರ್ಥಿಯ ಮನೆಗಳಲ್ಲಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ, ಹಲವು ದಾಖಲೆಗಳು ಮತ್ತು ನೋಟ್ ಬುಕ್ಗಳನ್ನು ವಶಪಡಿಸಿಕೊಂಡಿದ್ದಾರೆ. ಸೋರಿಕೆಯಾಗಿರುವ ಪ್ರಶ್ನೆ ಪತ್ರಿಕೆಗಳೊಂದಿಗೆ ಇವುಗಳಿಗೆ ಯಾವುದೇ ಸಂಬಂಧವಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ.
ಈ ವಂಚನೆ ಜಾಲವು ರಾಷ್ಟ್ರ ಮಟ್ಟದಲ್ಲಿ ವ್ಯಾಪಕವಾಗಿರಬಹುದು ಎಂಬ ಶಂಕೆಯ ಹಿನ್ನೆಲೆಯಲ್ಲಿ ಸಿಬಿಐ ದೇಶದ ವಿವಿಧ ಭಾಗಗಳಲ್ಲಿ ಶೋಧ ಮುಂದುವರಿಸಿದೆ. ಆದಾಗ್ಯೂ, ಈ ಹಗರಣದ ಕೇಂದ್ರ ನಾಗ್ಪುರ ಅಲ್ಲ ಎಂದು ಸಿಬಿಐ ಮೂಲಗಳು ಸ್ಪಷ್ಟಪಡಿಸಿವೆ.
