ಮಧ್ಯಪ್ರದೇಶದ ನರ್ಮದಾಪುರಂ ಜಿಲ್ಲೆಯ ಸಿವೋನಿ ಮಾಲ್ವಾ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ತಬಸ್ಸುಮ್ ಖಾನ್ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾಗಿ ಕೊಲೆ ಬೆದರಿಕೆ ಹಾಕಲಾಗಿದೆ. 2022ರಲ್ಲಿ ನಡೆದಿದ್ದ ಹೈಪ್ರೊಫೈಲ್ ಗುಂಪುಹತ್ಯೆ (ಮಾಬ್ ಲಂಚಿಂಗ್) ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ 14 ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದರು. ಈ ತೀರ್ಪು ಪ್ರಕಟವಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳನ್ನು ಹರಿಬಿಡಲಾಗಿದ್ದು, ಶಿಕ್ಷೆಗೆ ಒಳಗಾದವರನ್ನು 10 ದಿನಗಳಲ್ಲಿ ಬಿಡುಗಡೆ ಮಾಡದಿದ್ದರೆ ದೇಶಾದ್ಯಂತ ರಕ್ತಪಾತ ಮಾಡುವುದಾಗಿ ದುಷ್ಕರ್ಮಿಗಳು ಎಚ್ಚರಿಕೆ ನೀಡಿದ್ದಾರೆ.
ಪ್ರಕರಣದ ಹಿನ್ನೆಲೆಯನ್ನು ನೋಡುವುದಾದರೆ, 2022ರ ಆಗಸ್ಟ್ 3ರಂದು ಸಿವೋನಿ ಮಾಲ್ವಾ ತಹಸಿಲ್ನ ಬರಖಾಡ್ ಗ್ರಾಮದ ಬಳಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಲಾರಿಯೊಂದನ್ನು ತಡೆದ ಉದ್ರಿಕ್ತ ಗುಂಪು, ಅಕ್ರಮ ಸಾಗಣೆ ಆರೋಪ ಹೊರಿಸಿ ಲಾರಿಯಲ್ಲಿದ್ದವರ ಮೇಲೆ ಭೀಕರವಾಗಿ ಹಲ್ಲೆ ನಡೆಸಿತ್ತು. ಈ ದಾಳಿಯಲ್ಲಿ ಮಹಾರಾಷ್ಟ್ರದ ಅಮರಾವತಿ ನಿವಾಸಿ, 50 ವರ್ಷದ ನಜೀರ್ ಅಹ್ಮದ್ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದರು. ಲಾರಿ ಚಾಲಕ ಶೇಖ್ ಲಾಲಾ ಸೇರಿದಂತೆ ಇತರ ಇಬ್ಬರು ದಾಳಿಯಿಂದ ಬದುಕುಳಿದಿದ್ದರು. ಈ ಸೂಕ್ಷ್ಮ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶೆ ತಬಸ್ಸುಮ್ ಖಾನ್ ಅವರ ನ್ಯಾಯಪೀಠವು, ವೈದ್ಯಕೀಯ, ವಿಧಿವಿಜ್ಞಾನ ಮತ್ತು ಸಾಕ್ಷ್ಯಧಾರಗಳನ್ನು ಆಧರಿಸಿ ಜೂನ್ 12ರಂದು 14 ಮಂದಿ ಆರೋಪಿಗಳನ್ನು ಅಪರಾಧಿಗಳು ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಈ ನ್ಯಾಯಾಂಗ ತೀರ್ಪನ್ನು ವಿರೋಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿರುವ ವಿಡಿಯೋಗಳಲ್ಲಿ ನ್ಯಾಯಾಧೀಶರ ಧಾರ್ಮಿಕ ನಂಬಿಕೆಯನ್ನೇ ಗುರಿಯಾಗಿಸಿಕೊಂಡು ಅತ್ಯಂತ ಆಕ್ಷೇಪಾರ್ಹ ನಿಂದನೆಗಳನ್ನು ಮಾಡಲಾಗಿದೆ. ವೈರಲ್ ಆಗಿರುವ ಒಂದು ವಿಡಿಯೋದಲ್ಲಿ ಯುವಕನೊಬ್ಬ, ನಮ್ಮ 14 ಮಂದಿ ಸಹೋದರರನ್ನು 10 ದಿನಗಳಲ್ಲಿ ಬಿಡುಗಡೆ ಮಾಡದಿದ್ದರೆ ದೇಶ ಮತ್ತು ರಾಜ್ಯಾದ್ಯಂತ ರರಕ್ತಪಾತ ಮಾಡುವುದಾಗಿ ಎಚ್ಚರಿಸಿದ್ದಾನೆ. ಮುಸ್ಲಿಂ ಸಮುದಾಯದವರು ನ್ಯಾಯಾಧೀಶರಾಗಿರುವುದರಿಂದಲೇ ಇಂತಹ ತೀರ್ಪು ಬಂದಿದೆ ಎಂದು ಆರೋಪಿಸಿರುವ ಆತ, ಜಿಹಾದಿ ಸಿದ್ಧಾಂತದ ವಿರುದ್ಧ ಮಾತನಾಡುತ್ತಾ ಹಿಂದೂಗಳು ದುರ್ಬಲರಲ್ಲ, ಇದಕ್ಕೆ ಬೆಲೆ ತೆರಬೇಕಾಗುತ್ತದೆ ಎಂದು ಬಹಿರಂಗವಾಗಿ ಬೆದರಿಕೆ ಹಾಕಿದ್ದಾನೆ. ಮತ್ತೊಂದು ವಿಡಿಯೋದಲ್ಲಿ ಮಹಿಳೆಯೊಬ್ಬರು ಇದೇ ರೀತಿಯ ಪ್ರಚೋದನಾಕಾರಿ ಹೇಳಿಕೆ ನೀಡಿದ್ದು, ಗೋರಕ್ಷಣೆ ಮಾಡುವುದು ಕೊಲೆಯೇ ಎಂದು ಪ್ರಶ್ನಿಸಿದ್ದಾರೆ. ವಿಡಿಯೋದಲ್ಲಿರುವ ಒಬ್ಬ ವ್ಯಕ್ತಿಯನ್ನು ಗುಜರಾತ್ನ ಸೂರತ್ ನಿವಾಸಿ ವಿಶಾಲ್ ಸಿಂಗ್ ಎಂದು ಶಂಕಿಸಲಾಗಿದ್ದರೂ, ಪೊಲೀಸರು ಇನ್ನೂ ಅಧಿಕೃತವಾಗಿ ಇವರ ಗುರುತನ್ನು ಖಚಿತಪಡಿಸಿಲ್ಲ.
ನ್ಯಾಯಾಂಗ ವ್ಯವಸ್ಥೆಯ ಮೇಲೆಯೇ ನಡೆದಿರುವ ಈ ಗಂಭೀರ ದಾಳಿಯನ್ನು ಸಿವೋನಿ ಮಾಲ್ವಾ ಪೊಲೀಸರು ಸ್ವಯಂಪ್ರೇರಿತರಾಗಿ (ಸುಯೋ ಮೋಟು) ಪರಿಗಣಿಸಿ, ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ಇಬ್ಬರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ನ್ಯಾಯಾಧೀಶರಿಂದ ಯಾವುದೇ ಔಪಚಾರಿಕ ದೂರು ಬರದಿದ್ದರೂ ಪ್ರಕರಣದ ಗಂಭೀರತೆಯನ್ನು ಅರಿತು ತಕ್ಷಣವೇ ಕ್ರಮ ಕೈಗೊಳ್ಳಲಾಗಿದೆ ಎಂದು ಠಾಣಾಧಿಕಾರಿ ಸುಧಾಕರ್ ಬಾರಸ್ಕರ್ ತಿಳಿಸಿದ್ದಾರೆ. ಕೇಂದ್ರ ಗೃಹ ಸಚಿವಾಲಯದ ಸೈಬರ್ ಸೆಲ್ ಕೂಡ ಐಟಿ ಕಾಯ್ದೆಯಡಿ ನೋಟಿಸ್ ಜಾರಿ ಮಾಡಿದೆ. ಸದ್ಯ ನ್ಯಾಯಾಧೀಶರ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರಿದಿದೆ. ಪ್ರಜಾಪ್ರಭುತ್ವದ ಪ್ರಮುಖ ಅಂಗವಾದ ನ್ಯಾಯಾಂಗದ ಅಧಿಕಾರಿಗಳಿಗೆ ತೀರ್ಪುಗಳ ಹಿನ್ನೆಲೆಯಲ್ಲಿ ಇಂತಹ ಬೆದರಿಕೆಗಳು ಬರುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.
