ದೇಶದಲ್ಲಿ ನಡೆಯುತ್ತಿರುವ ರಾಜ್ಯಸಭಾ ಚುನಾವಣೆಯ ನಾಮಪತ್ರ ಪರಿಶೀಲನೆ ಪ್ರಕ್ರಿಯೆಯಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಚುನಾವಣಾ ಆಯೋಗ (ಇಸಿಐ) ಶಾಮೀಲಾಗಿವೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ಮಧ್ಯಪ್ರದೇಶ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ ವೇಳೆ ಚುನಾವಣಾ ಆಯೋಗವು ಎರಡು ಬೇರೆ ಬೇರೆ ಮಾನದಂಡಗಳನ್ನು ಬಳಸಿದೆ ಎಂದು ಆರೋಪಿಸಿರುವ ಅವರು, ಇದು ಪ್ರಜಾಪ್ರಭುತ್ವದಲ್ಲಿ ನಡೆಯುತ್ತಿರುವ ‘ಸೀಟ್ ಚೋರಿ’ (ಸ್ಥಾನಗಳ ಕಳ್ಳತನ) ಎಂದು ಕಟುವಾಗಿ ಟೀಕಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, “ಮತ ಚೋರಿ ಮತ್ತು ಸರ್ಕಾರ ಚೋರಿಯ ನಂತರ, ಈಗ ಬಿಜೆಪಿ-ಚುನಾವಣಾ ಆಯೋಗದ ಜುಗಲ್ಬಂದಿಯು ಸ್ಪರ್ಧೆ ಆರಂಭವಾಗುವ ಮುನ್ನವೇ ‘ಸೀಟ್ ಚೋರಿ’ ಮಾಡುವ ಮೂಲಕ ಸ್ಪರ್ಧೆಯನ್ನು ಮುಗಿಸಿದೆ. ಬಿಜೆಪಿಗೆ ಚುನಾವಣೆ ಗೆಲ್ಲುವುದಕ್ಕಿಂತ ಅದನ್ನು ಮೊದಲೇ ಫಿಕ್ಸ್ ಮಾಡುವುದು ತುಂಬಾ ಸುಲಭದ ಕೆಲಸವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೀನಾಕ್ಷಿ ನಟರಾಜನ್ ಅವರ ನಾಮಪತ್ರ ತಿರಸ್ಕೃತಗೊಂಡಿರುವುದು ಮತ್ತು ಜಾರ್ಖಂಡ್ನಲ್ಲಿ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಪರಿಮಳ್ ನತ್ವಾಣಿ ಅವರ ನಾಮಪತ್ರ ಅಂಗೀಕಾರವಾಗಿರುವುದು ಈಗ ಈ ರಾಜಕೀಯ ಜಿದ್ದಾಜಿದ್ದಿಗೆ ಮುಖ್ಯ ಕಾರಣವಾಗಿದೆ.
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ನಾಯಕಿ ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ಚುನಾವಣಾಧಿಕಾರಿ ಅರವಿಂದ್ ಶರ್ಮಾ ಅವರು ತಿರಸ್ಕರಿಸಿದ್ದಾರೆ. ಹೈದರಾಬಾದ್ನ ನ್ಯಾಯಾಲಯವೊಂದರಲ್ಲಿ ಇರುವ ಖಾಸಗಿ ದೂರಿಗೆ ಸಂಬಂಧಿಸಿದ ಮಾಹಿತಿ ಹಾಗೂ ಅಪೂರ್ಣ ಅಫಿಡವಿಟ್ ಸಲ್ಲಿಕೆಯನ್ನು ನಾಮಪತ್ರ ತಿರಸ್ಕಾರಕ್ಕೆ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಮೀನಾಕ್ಷಿ ನಟರಾಜನ್ ವಿರುದ್ಧ ಯಾವುದೇ ಎಫ್ಐಆರ್ ದಾಖಲಾಗಿಲ್ಲ ಮತ್ತು ನ್ಯಾಯಾಲಯವು ಯಾವುದೇ ಚಾರ್ಜ್ಶೀಟ್ ಹಾಕಿಲ್ಲ. ಕೇವಲ ಖಾಸಗಿ ದೂರಿನ ನೋಟಿಸ್ ಅನ್ನು ಬಾಕಿ ಇರುವ ಕ್ರಿಮಿನಲ್ ಪ್ರಕರಣ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂಬುದು ಕಾಂಗ್ರೆಸ್ ವಾದ. ಈ ತಿರಸ್ಕಾರದ ಬೆನ್ನಲ್ಲೇ ಮಧ್ಯಪ್ರದೇಶದ ಮೂರೂ ಸ್ಥಾನಗಳಲ್ಲಿ ಬಿಜೆಪಿಯ ತರುಣ್ ಚುಗ್, ರಜನೀಶ್ ಅಗರ್ವಾಲ್ ಮತ್ತು ಮಹೇಶ್ ಕೇವತ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇತ್ತ ಜಾರ್ಖಂಡ್ನಲ್ಲಿ ಬಿಜೆಪಿ ಬೆಂಬಲಿತ ಉದ್ಯಮಿ ಪರಿಮಳ್ ನತ್ವಾಣಿ ಅವರ ನಾಮಪತ್ರದಲ್ಲಿ ತಪ್ಪುಗಳಿದ್ದರೂ ಅವರಿಗೆ ಸರಿಪಡಿಸಿಕೊಳ್ಳಲು ಕಾಲಾವಕಾಶ ನೀಡಲಾಗಿತ್ತು ಎಂದು ಕಾಂಗ್ರೆಸ್ ಆರೋಪಿಸಿದೆ. ನತ್ವಾಣಿ ಅವರ ಅಫಿಡವಿಟ್ನಲ್ಲಿ ಆಸ್ತಿ ವಿವರ, ಕಂಪನಿಗಳ ಮಾಹಿತಿ ಮತ್ತು ಪತ್ನಿಯ ವಿವರಗಳ ಕಾಲಂಗಳು ಅಪೂರ್ಣವಾಗಿದ್ದವು. ಆದರೂ ಚುನಾವಣಾಧಿಕಾರಿಗಳು ಅವರ ನಾಮಪತ್ರವನ್ನು ಅಂಗೀಕರಿಸಿದ್ದಾರೆ. “ವಿರೋಧ ಪಕ್ಷಕ್ಕೊಂದು ನ್ಯಾಯ, ಆಡಳಿತ ಪಕ್ಷಕ್ಕೊಂದು ನ್ಯಾಯವೇ?” ಎಂದು ಕಾಂಗ್ರೆಸ್ ನಾಯಕರಾದ ಅಭಿಷೇಕ್ ಮನು ಸಿಂಘ್ವಿ ಮತ್ತು ಕೆ.ಸಿ. ವೇಣುಗೋಪಾಲ್ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ನಿಯೋಗವು ಈ ಕುರಿತು ಚುನಾವಣಾ ಆಯೋಗವನ್ನು ಭೇಟಿ ಮಾಡಿ ಪ್ರತಿಭಟನೆ ನಡೆಸಿದೆ. ಮತ್ತೊಂದೆಡೆ, ಕಾಂಗ್ರೆಸ್ ನಾಯಕಿ ಮೀನಾಕ್ಷಿ ನಟರಾಜನ್ ಅವರು ಮಧ್ಯಪ್ರದೇಶ ಚುನಾವಣಾಧಿಕಾರಿಯ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಸುಪ್ರೀಂ ಕೋರ್ಟ್ನ ರಜಾಕಾಲದ ಪೀಠವು ಈ ಅರ್ಜಿಯನ್ನು ಜೂನ್ 12 ರಂದು ವಿಚಾರಣೆಗೆ ಕೈಗೆತ್ತಿಕೊಳ್ಳಲು ಒಪ್ಪಿಕೊಂಡಿದೆ.
