ಮುಂಬೈ: ಮುಂಬರುವ ಬಕ್ರೀದ್ ಹಬ್ಬವನ್ನು ‘ವರ್ಚುವಲ್’ ಆಗಿ ಆಚರಿಸುವಂತೆ ಸಲಹೆ ನೀಡಿದ್ದ ಮಹಾರಾಷ್ಟ್ರದ ಬಂದರು ಅಭಿವೃದ್ಧಿ ಸಚಿವ ಹಾಗೂ ಬಿಜೆಪಿ ಮುಖಂಡ ನಿತೇಶ್ ರಾಣೆ ಅವರ ಹೇಳಿಕೆಗೆ ಸ್ವಪಕ್ಷದಲ್ಲೇ ತೀವ್ರ ವಿರೋಧ ವ್ಯಕ್ತವಾಗಿದೆ. ಬಿಜೆಪಿ ಹಿರಿಯ ನಾಯಕ ಹಾಜಿ ಅರಾಫತ್ ಶೇಖ್ ಅವರು ನಿತೇಶ್ ರಾಣೆ ಅವರಿಗೆ ತೀಕ್ಷ್ಣವಾಗಿ ತಿರುಗೇಟು ನೀಡಿದ್ದು, ರಾಣೆ ಕುಟುಂಬದ ಹಳೆಯ ಮಾಂಸದ ವ್ಯಾಪಾರದ ಹಿನ್ನೆಲೆಯನ್ನು ಬಹಿರಂಗವಾಗಿ ನೆನಪಿಸಿದ್ದಾರೆ. ಅಲ್ಲದೆ, ಹಬ್ಬದ ಸಂದರ್ಭದಲ್ಲಿ ಜಾನುವಾರು ಸಾಗಾಟಗಾರರಿಗೆ ನೀಡಲಾಗುತ್ತಿರುವ ಕಿರುಕುಳದ ಬಗ್ಗೆಯೂ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸಚಿವ ನಿತೇಶ್ ರಾಣೆ, ಹಿಂದೂ ಹಬ್ಬಗಳಾದ ಹೋಳಿ ಮತ್ತು ದೀಪಾವಳಿ ಸಂದರ್ಭದಲ್ಲಿ ಪರಿಸರ ಕಾಳಜಿಯ ಮಾತುಗಳನ್ನಾಡುವ ಸಾಮಾಜಿಕ ಕಾರ್ಯಕರ್ತರು ಬಕ್ರೀದ್ ವೇಳೆ ಏಕೆ ಮೌನ ವಹಿಸುತ್ತಾರೆ ಎಂದು ಪ್ರಶ್ನಿಸಿದ್ದರು. ಅಲ್ಲದೆ, ಕಂಪ್ಯೂಟರ್ ಪರದೆಯ ಮೇಲೆ ಮೇಕೆಯ ಚಿತ್ರವನ್ನು ಪ್ರದರ್ಶಿಸುವ ಮೂಲಕ ‘ವರ್ಚುವಲ್’ ರೂಪದಲ್ಲಿ ಕುರ್ಬಾನಿ (ತ್ಯಾಗ) ನೀಡಬಾರದೇಕೆ ಎಂದು ಸಲಹೆ ನೀಡಿದ್ದರು. ಈ ಹೇಳಿಕೆ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು.
ರಾಣೆ ಅವರ ಈ ವಿಲಕ್ಷಣ ಸಲಹೆಗೆ ಆಕ್ರೋಶ ವ್ಯಕ್ತಪಡಿಸಿರುವ ಹಾಜಿ ಅರಾಫತ್ ಶೇಖ್, ಸಚಿವರಿಗೆ ಮೊದಲು ವಾಸ್ತವದ ಅರಿವಿರಬೇಕು ಎಂದು ಖಾರವಾಗಿ ನುಡಿದಿದ್ದಾರೆ. ನಿತೇಶ್ ರಾಣೆ ಅವರ ತಂದೆ ನಾರಾಯಣ್ ರಾಣೆ ಅವರು ಹಿಂದೆ ಮಾಂಸದ ಅಂಗಡಿ ನಡೆಸುತ್ತಲೇ ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೇರಿದ್ದಾರೆ ಎಂಬುದನ್ನು ನೆನಪಿಸಿರುವ ಶೇಖ್, ರಾಣೆ ಕುಟುಂಬಕ್ಕೆ ಇಂದಿಗೂ ಮುಂಬೈನ ಚೆಂಬೂರಿನಲ್ಲಿ ಹೋಟೆಲ್ ವ್ಯವಹಾರವಿದೆ. ಅಲ್ಲಿ ಅತ್ಯುತ್ತಮವಾದ ಮಟನ್ ಮಸಾಲಾ ಮಾರಾಟ ಮಾಡಲಾಗುತ್ತದೆ. ಭಾನುವಾರ ಮಟನ್ ತಿನ್ನುವ ಅಭ್ಯಾಸವಿರುವ ನಿತೇಶ್ ರಾಣೆ, ಒಮ್ಮೆ ಮಟನ್ ಬದಲಿಗೆ ಕಾಗದವನ್ನು ತಿಂದು ಅದರ ರುಚಿ ಹೇಗಿರುತ್ತದೆ ಎಂದು ನೋಡಲಿ ಎಂದು ವ್ಯಂಗ್ಯವಾಡಿದ್ದಾರೆ. ಈ ಕುರಿತು ತಮ್ಮ ತಂದೆಯವರಿಂದ ಸೂಕ್ತ ಸಲಹೆ ಪಡೆಯುವಂತೆಯೂ ಅವರು ಲೇವಡಿ ಮಾಡಿದ್ದಾರೆ.
ಕೇವಲ ವೈಯಕ್ತಿಕ ಟೀಕೆಗೆ ಸೀಮಿತವಾಗದ ಹಾಜಿ ಅರಾಫತ್, ಹಬ್ಬದ ಹಿನ್ನೆಲೆಯಲ್ಲಿ ಜಾನುವಾರು ಮತ್ತು ಮೇಕೆಗಳನ್ನು ಸಾಗಿಸುವ ವಾಹನಗಳನ್ನು ಅನಗತ್ಯವಾಗಿ ತಡೆಯುತ್ತಿರುವುದರ ವಿರುದ್ಧ ಧ್ವನಿ ಎತ್ತಿದ್ದಾರೆ. ಸರ್ಕಾರದ ಈ ಧೋರಣೆಯಿಂದಾಗಿ ಕೇವಲ ಮುಸ್ಲಿಂ ಸಮುದಾಯ ಮಾತ್ರವಲ್ಲದೆ, ಹಿಂದೂ ಕಟುಕರು ಮತ್ತು ಕುರಿ-ಮೇಕೆ ಸಾಕೋಪನೆ ಮಾಡುವ ಧಂಗರ್ (ಕುರುಬ) ಸಮುದಾಯದವರೂ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ವರ್ಷಕ್ಕೊಮ್ಮೆ ಬರುವ ಹಬ್ಬದ ಸೀಸನ್ನಲ್ಲಿ ವ್ಯಾಪಾರ ಮಾಡಿ ಜೀವನ ನಡೆಸುವ ಬಡ ವ್ಯಾಪಾರಿಗಳ ಹೊಟ್ಟೆಯ ಮೇಲೆ ಹೊಡೆಯಬೇಡಿ ಎಂದು ಅವರು ಮನವಿ ಮಾಡಿದ್ದಾರೆ. ಮೀರಾ -ಭಾಯಂದರ್ ಸೇರಿದಂತೆ ಹಲವು ಕಡೆಗಳಲ್ಲಿ ಎಲ್ಲಾ ನಿಯಮಾವಳಿಗಳು ಮತ್ತು ಪರವಾನಗಿಗಳಿದ್ದರೂ ವಾಹನಗಳನ್ನು ವಶಪಡಿಸಿಕೊಳ್ಳಲಾಗುತ್ತಿದ್ದು, ಈ ಬಗ್ಗೆ ಮಹಾರಾಷ್ಟ್ರ ಸರ್ಕಾರವು ತಕ್ಷಣವೇ ಸ್ಪಷ್ಟ ಮತ್ತು ಏಕರೂಪದ ಮಾರ್ಗಸೂಚಿಗಳನ್ನು ಹೊರಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಆದೇಶದ ಮೇರೆಗೆ ರಾಜ್ಯಾದ್ಯಂತ ಜಾನುವಾರುಗಳ ಅಕ್ರಮ ಸಾಗಣೆ ತಡೆಗೆ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ. ಆದರೆ, ಅಧಿಕೃತ ಪರವಾನಗಿ ಹೊಂದಿರುವ ಮೇಕೆ ಸಾಗಾಟಕ್ಕೂ ತೊಂದರೆಯಾಗುತ್ತಿರುವುದು ಈಗ ಆಡಳಿತಾರೂಢ ಬಿಜೆಪಿ ಒಳಗಡೆಯೇ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ. ಧಾರ್ಮಿಕ ಆಚರಣೆ, ಬಡವರ ಜೀವನೋಪಾಯ ಮತ್ತು ಸರ್ಕಾರದ ನಿಯಮಾವಳಿಗಳ ನಡುವಿನ ಈ ಸಂಘರ್ಷ ಈಗ ಮಹಾರಾಷ್ಟ್ರ ರಾಜಕಾರಣದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಹಾಜಿ ಅರಾಫತ್ ಅವರ ಬಹಿರಂಗ ಅಸಮಾಧಾನಕ್ಕೆ ಸಚಿವ ನಿತೇಶ್ ರಾಣೆ ಅಥವಾ ರಾಜ್ಯ ಸರ್ಕಾರ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
