ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದ ನಂತರ 19 ತಿಂಗಳ ಗಂಡು ಮಗುವೊಂದು ತನ್ನ ಕಣ್ಣಿನ ದೃಷ್ಟಿಯನ್ನೇ ಕಳೆದುಕೊಂಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮಗುವಿಗೆ ತಪ್ಪು ಔಷಧ ನೀಡಿದ್ದೇ ಈ ದುರಂತಕ್ಕೆ ಕಾರಣ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಈ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆಯು ಘಟನೆ ಕುರಿತು ತನಿಖೆ ನಡೆಸಲು ಮೂರು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ.
ಸಾಗರ್ ಜಿಲ್ಲೆಯ ಭೂಸಾ ಕಮಲ್ಪುರ ಗ್ರಾಮದ ಇಂದ್ರಜ್ ವಿಶ್ವಕರ್ಮ ಅವರ 19 ತಿಂಗಳ ಮಗ ವಿನಯ್ ವಿಶ್ವಕರ್ಮನಿಗೆ ಕಫ, ನೆಗಡಿ ಮತ್ತು ಕಣ್ಣು ಕೆಂಪಾಗಿದ್ದ ಹಿನ್ನೆಲೆಯಲ್ಲಿ ಮೇ 29 ರಂದು ಬಂದಾ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ (OPD) ಮಕ್ಕಳ ತಜ್ಞ ಡಾ. ಹಿಮಾಂಶು ವರ್ಮಾ ಅವರು ಮಗುವನ್ನು ಪರೀಕ್ಷಿಸಿ ಕೆಲವು ದ್ರಾವಣಗಳು ಮತ್ತು ಸಿರಪ್ಗಳನ್ನು ಚೀಟಿಯಲ್ಲಿ ಬರೆದುಕೊಟ್ಟಿದ್ದರು. ಆದರೆ, ಆಸ್ಪತ್ರೆಯ ಸಿಬ್ಬಂದಿ ಕಫ ನಿವಾರಣೆಗೆ ಮೂಗಿಗೆ ಹಾಕಬೇಕಾಗಿದ್ದ ಡ್ರಾಪ್ಸ್ (ಸಲೈನ್ ನಾಸಲ್ ಡ್ರಾಪ್ಸ್) ಅನ್ನು ಮಗುವಿನ ಕಣ್ಣಿಗೆ ಹಾಕಿದ್ದಾರೆ ಎಂದು ಪೋಷಕರು ದೂರಿದ್ದಾರೆ.
ಔಷಧ ಹಾಕಿದ ಕೆಲವೇ ಗಂಟೆಗಳಲ್ಲಿ ಮಗುವಿನ ಸ್ಥಿತಿ ಹದಗೆಟ್ಟಿದೆ. ತಕ್ಷಣವೇ ಮಗುವನ್ನು ಸಾಗರ್ ಜಿಲ್ಲಾ ಆಸ್ಪತ್ರೆಗೆ ಹಾಗೂ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಸುಮಾರು 225 ಕಿಲೋಮೀಟರ್ ದೂರದಲ್ಲಿರುವ ಭೋಪಾಲ್ನ ಪ್ರತಿಷ್ಠಿತ ಎಮ್ಸ್ (AIIMS) ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ, ತಪ್ಪು ಔಷಧದ ತೀವ್ರತೆಯಿಂದಾಗಿ ಮಗು ಸಂಪೂರ್ಣವಾಗಿ ದೃಷ್ಟಿ ಕಳೆದುಕೊಂಡಿದೆ ಎಂದು ಎಮ್ಸ್ ವೈದ್ಯರು ದೃಢಪಡಿಸಿದ್ದಾರೆ ಎಂದು ಪೋಷಕರು ಕಣ್ಣೀರು ಹಾಕಿದ್ದಾರೆ. ಈ ಸಂಬಂಧ ಮಗುವಿನ ತಂದೆ ಇಂದ್ರಜ್ ಅವರು ಬಂದಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮಗನ ಜೀವನ ಹಾಳುಮಾಡಿದ ವೈದ್ಯರು ಮತ್ತು ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರದೀಪ್ ಈಶ್ವರ್ ಎದೆಗುಂದಬೇಕಿಲ್ಲ, ಅವರ ಜೊತೆ ಕಾಂಗ್ರೆಸ್ ಪಕ್ಷ ದೃಢವಾಗಿ ನಿಂತಿದೆ; ಬಿ.ಕೆ. ಹರಿಪ್ರಸಾದ್
ಮಧ್ಯಪ್ರದೇಶ: ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬೆನ್ನಲ್ಲೇ ಕಣ್ಣಿನ ದೃಷ್ಟಿ ಕಳೆದುಕೊಂಡ 19 ತಿಂಗಳ ಮಗು; ತನಿಖೆಗೆ ಆದೇಶ
ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತದ ಹೊಸ ಆದೇಶ: ಸರ್ಕಾರಿ ನೌಕರರು ಮತ್ತು ಸೇನಾಧಿಕಾರಿಗಳಿಗೆ ಸ್ಮಾರ್ಟ್ಫೋನ್ ಬಳಕೆ ನಿಷೇಧ
ಗುಂಪುಹತ್ಯೆ ಪ್ರಕರಣದಲ್ಲಿ 14 ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಧೀಶೆ ತಬಸ್ಸುಮ್ ಖಾನ್ ಗೆ ಜೀವ ಬೆದರಿಕೆ
ಈ ಆರೋಪಗಳ ಕುರಿತು ಪ್ರತಿಕ್ರಿಯಿಸಿರುವ ಮಕ್ಕಳ ತಜ್ಞ ಡಾ. ಹಿಮಾಂಶು, ಮಗುವನ್ನು ಆಸ್ಪತ್ರೆಗೆ ತಂದಾಗಲೇ ಅದರ ಸ್ಥಿತಿ ಗಂಭೀರವಾಗಿತ್ತು. ಹಾಗಾಗಿ ಪ್ರಾಥಮಿಕ ಚಿಕಿತ್ಸೆ ನೀಡಿ ತಕ್ಷಣವೇ ಮೇಲ್ಮಟ್ಟದ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಲಾಗಿತ್ತು ಎಂದಿದ್ದಾರೆ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕಣ್ಣಿನ ಔಷಧದ ಬಾಟಲಿಗೂ ತಾವು ಬರೆದುಕೊಟ್ಟ ಚೀಟಿಗೂ ಸಾಮ್ಯತೆಯಿಲ್ಲ. ಮಗು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ವೈದ್ಯಕೀಯ ವಿಜ್ಞಾನದ ಪ್ರಕಾರ ಅಪೌಷ್ಟಿಕತೆಯೂ ದೃಷ್ಟಿ ದೋಷಕ್ಕೆ ಕಾರಣವಾಗಬಹುದು. ತನಿಖೆಯ ಮುನ್ನವೇ ಯಾರನ್ನೂ ದೂಷಿಸುವುದು ಸರಿಯಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
ಸಾಗರ್ ಜಿಲ್ಲೆಯ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಡಾ. ಗಂಗಾ ಪ್ರಸಾದ್ ಆರ್ಯ ಅವರು ಪ್ರತಿಕ್ರಿಯಿಸಿ, ಘಟನೆಯ ನಿಷ್ಪಕ್ಷಪಾತ ತನಿಖೆಗೆ ಆದೇಶಿಸಲಾಗಿದೆ. ಮೂರು ಸದಸ್ಯರ ಸಮಿತಿಯು ಯಾವ ಔಷಧವನ್ನು ಶಿಫಾರಸು ಮಾಡಲಾಗಿತ್ತು ಮತ್ತು ವಾಸ್ತವವಾಗಿ ಮಗುವಿಗೆ ಏನನ್ನು ನೀಡಲಾಗಿದೆ ಎಂಬುದನ್ನು ಪರಿಶೀಲಿಸಿ ಒಂದು ವಾರದೊಳಗೆ ವರದಿ ನೀಡಲಿದೆ. ನಿರ್ಲಕ್ಷ್ಯ ಸಾಬೀತಾದರೆ ಕಠಿಣ ಕ್ರಮ ಖಂಡಿತ ಎಂದು ಭರವಸೆ ನೀಡಿದ್ದಾರೆ. ಸದ್ಯ ಪೊಲೀಸರು ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸುವ ಪ್ರಕ್ರಿಯೆಯಲ್ಲಿದ್ದು, ತನಿಖಾ ವರದಿಯ ನಂತರವೇ ಈ ಕರುಣಾಜನಕ ಘಟನೆಯ ಹಿಂದಿನ ನೈಜ ಸತ್ಯಾಂಶ ಹೊರಬರಬೇಕಿದೆ.
