“ಇನ್ನು ಮುಂದೆ ದ್ವೇಷ ಭಾಷಣ ಮಾಡುವುದಿಲ್ಲ” ಎಂದು ಹೈಕೋರ್ಟ್ ಗೆ ಮಾತು ಕೊಟ್ಟ ಕಲ್ಲಡ್ಕ ಪ್ರಭಾಕರ್ ಭಟ್ ಗೆ ಕಾಂಗ್ರೆಸ್ ಶಾಸಕರಾದ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದು ʼಪುರಾಣದ ಬಸ್ಮಾಸುರ ತಲೆ ಮೇಲೆ ಕೈ ಇಟ್ಟು ಸಿಕ್ಕವರನ್ನು ಸುಡುತ್ತಿದ್ದನಂತೆ, RSS ಎಂಬ ಆಧುನಿಕ ಬಸ್ಮಾಸುರ ಮುಗ್ದ ಯುವಸಮುದಾಯದ ಮೆದುಳಿಗೆ ಕೈ ಇಟ್ಟು ಇಡೀ ದೇಶವನ್ನೇ ಸುಡುತ್ತಿದೆʼ ಎಂದು ಹೇಳಿದ್ದಾರೆ.
ಪ್ರಿಯಾಂಕ್ ಖರ್ಗೆ ಹೇಳಿಕೆ ಕೆಳಗೆ ನೀಡಲಾಗಿದೆ
“ಪುರಾಣದ ಬಸ್ಮಾಸುರ ತಲೆ ಮೇಲೆ ಕೈ ಇಟ್ಟು ಸಿಕ್ಕವರನ್ನು ಸುಡುತ್ತಿದ್ದನಂತೆ, RSS ಎಂಬ ಆಧುನಿಕ ಬಸ್ಮಾಸುರ ಮುಗ್ದ ಯುವಸಮುದಾಯದ ಮೆದುಳಿಗೆ ಕೈ ಇಟ್ಟು ಇಡೀ ದೇಶವನ್ನೇ ಸುಡುತ್ತಿದೆ.
RSS ಕಾಲಾನುಕಾಲದಿಂದಲೂ ಸಮಾಜಕ್ಕೆ ವಿಷವನ್ನೇ ಉಣಿಸುತ್ತಾ ಬಂದಿದೆ, ದ್ವೇಷ, ದಳ್ಳುರಿಗಳಲ್ಲೇ ಅವರ ಅಸ್ತಿತ್ವವಿರುವುದು, ಸುಳ್ಳುಗಳಲ್ಲೇ ಅವರು ಯಶಸ್ಸು ಕಾಣುವುದು.
“ಇನ್ನು ಮುಂದೆ ದ್ವೇಷ ಭಾಷಣ ಮಾಡುವುದಿಲ್ಲ” ಎಂದು ನ್ಯಾಯಾಲಯಕ್ಕೆ ಹೇಳುವ ಮೂಲಕ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ತಾವು ಇಷ್ಟು ದಿನಗಳ ಕಾಲ ದ್ವೇಷವನ್ನೇ ಉಸಿರಾಡಿದ್ದು ಎಂಬುದನ್ನು ಒಪ್ಪಿಕೊಂಡಂತಾಗಿದೆ.
ವಿಚಾರಣೆ ಎದುರಿಸುವುದಕ್ಕೆ, ನ್ಯಾಯಾಲಯದ ಮುಂದೆ ಹಾಜರಾಗುವುದಕ್ಕೆ ಕಲ್ಲಡ್ಕ ಭಟ್ ಗೆ ವಯಸ್ಸು ಅಡ್ಡಿಯಾಗುತ್ತದೆ, ಅದೇ ವೇದಿಕೆ ಮತ್ತು ಮೈಕ್ ಕೊಟ್ಟರೆ ವಯಸ್ಸಿನ ಹಿರಿತನ ಮರೆತು ಮೈಕ್ ಹಿಡಿದು ಎದ್ದೆದ್ದು ಹಾರುತ್ತಾರೆ!
RSS ಈ ದೇಶದ ಶಾಂತಿ ಸಾಮರಸ್ಯಕ್ಕೆ ಬೆಂಕಿ ಹಾಕುತ್ತಿದೆ ಎನ್ನುವುದಕ್ಕೆ ಕಲ್ಲಡ್ಕ ಭಟ್ಟರೇ ಉತ್ತಮ ಉದಾಹರಣೆ.
ಬಂಧನ ತಪ್ಪಿಸಿಕೊಳ್ಳುವ ಕಾರಣಕ್ಕೆ ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೊಳ್ಳುವುದಷ್ಟೇ ಅಲ್ಲ, ಅದು ನಿಜವಾಗಿಯೂ ಪ್ರಾಯಶ್ಚಿತ್ತದ ಮಾತುಗಳಾಗಬೇಕು, ಬಹಿರಂಗವಾಗಿ ಈ ನಾಡಿನ ಕ್ಷಮೆ ಕೇಳಬೇಕು” ಎಂದು ಸಾಮಾಜಿಕ ತಾಣ X ನಲ್ಲಿ ಪ್ರತಿಕ್ರಿಯಿಸಿದ್ದಾರೆ.
