ಡೆಹ್ರಾಡೂನ್: ಉತ್ತರಾಖಂಡದ ತೆಹ್ರಿ ಗರ್ವಾಲ್ ಜಿಲ್ಲೆಯ ಪ್ರತಾಪನಗರ ಬ್ಲಾಕ್ನಲ್ಲಿ ಭೀಕರ ಘಟನೆಯೊಂದು ಬೆಳಕಿಗೆ ಬಂದಿದ್ದು, ಬೇರೆ ಜಾತಿಯ ಅಪ್ರಾಪ್ತ ಹುಡುಗಿಯೊಂದಿಗೆ ಸ್ನೇಹ ಹೊಂದಿದ್ದ ಕಾರಣಕ್ಕೆ ೧೮ ವರ್ಷದ ದಲಿತ ವಿದ್ಯಾರ್ಥಿಯೊಬ್ಬನನ್ನು ಹುಡುಗಿಯ ಕುಟುಂಬಸ್ಥರು ರಾತ್ರಿಯಿಡೀ ಕೂಡಿ ಹಾಕಿ, ಅತ್ಯಂತ ಕ್ರೂರವಾಗಿ ಹೊಡೆದು ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಹುಡುಗಿಯ ತಂದೆ ಮತ್ತು ಅಜ್ಜನನ್ನು ಪೊಲೀಸರು ಬಂಧಿಸಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಹಾಗೂ ಕೊಲೆ ಪ್ರಕರಣದ ಅಡಿಯಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ.
ಮೃತರನ್ನು ದೇವಲ್ ಗ್ರಾಮದ ನಿವಾಸಿ, ದ್ವಿತೀಯ ಪಿಯುಸಿ (ಕ್ಲಾಸ್ 12) ವಿದ್ಯಾರ್ಥಿ ಕೇತನ್ ಲಾಲ್ ಎಂದು ಗುರುತಿಸಲಾಗಿದೆ. ಈ ದಾಳಿಯಲ್ಲಿ ಕೇತನ್ ಅವರ ಸ್ನೇಹಿತ ದಿವಾಕರ್ ದಿಮ್ರಿ ಎಂಬುವವರಿಗೂ ಗಂಭೀರ ಗಾಯಗಳಾಗಿದ್ದು, ಪ್ರಸ್ತುತ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೇತನ್ ಅವರ ತಂದೆ ಧನಪಾಲ್ ಲಾಲ್ ನೀಡಿರುವ ದೂರಿನ ಪ್ರಕಾರ, ಭಾನುವಾರ ಮತ್ತು ಸೋಮವಾರದ ಮಧ್ಯರಾತ್ರಿ ಈ ಘಟನೆ ನಡೆದಿದೆ. ಅಪ್ರಾಪ್ತ ಹುಡುಗಿಯ ಫೋನ್ನಿಂದ ಬಂದ ಕರೆಯ ಆಧಾರದ ಮೇಲೆ ಕೇತನ್ ಮತ್ತು ದಿವಾಕರ್ ಲಂಬಗಾಂವ್ ಪ್ರದೇಶದಲ್ಲಿದ್ದ ಹುಡುಗಿಯ ಮನೆಗೆ ಹೋಗಿದ್ದರು. ಈ ವೇಳೆ ಹುಡುಗಿಯ ಕುಟುಂಬದವರು ಅವರಿಬ್ಬರನ್ನು ಹಿಡಿದು ಕೋಣೆಯೊಂದರಲ್ಲಿ ಕೂಡಿಹಾಕಿದ್ದಾರೆ. ನಂತರ ರಾತ್ರಿಯಿಡೀ ದೊಣ್ಣೆಗಳು, ಕಬ್ಬಿಣದ ರಾಡ್ಗಳು ಮತ್ತು ಬೆಲ್ಟ್ಗಳಿಂದ ಇಬ್ಬರ ಮೇಲೂ ಭೀಕರವಾಗಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
AI ಎಡಿಟ್ ಮಾಡಿ ಬಿಹಾರದಲ್ಲಿ ಅಭಿವೃದ್ಧಿ ತೋರಿಸಲು ಪ್ರಯತ್ನಿಸಿದ ಬಿಜೆಪಿ; ಅಸಲಿಯತ್ತನ್ನು ಬಯಲಿಗೆಳೆದ ನೆಟ್ಟಿಗರು!
‘ಐಐಟಿ ಬಾಬಾ’ ಬಂಧನ: ಆಧ್ಯಾತ್ಮಿಕತೆಯ ಹೆಸರಲ್ಲಿ ಯುವತಿಯರ ಲೈಂಗಿಕ ಕಿರುಕುಳ, ಬ್ಲಾಕ್ಮೇಲ್ ಆರೋಪ!
ದೆಹಲಿ ಅಗ್ನಿ ದುರಂತ: ತಮ್ಮ ಅಂಗಡಿಯ ಲಕ್ಷಾಂತರ ರೂಪಾಯಿ ಮೌಲ್ಯದ ಹಾಸಿಗೆಗಳನ್ನು ರಸ್ತೆಗೆ ಹಾಸಿ 8 ಜನರ ಪ್ರಾಣ ಉಳಿಸಿದ ರಿಯಾಝುದ್ದೀನ್ – ಅರ್ಮಾನ್
ಆರೋಪಿಗಳು ಹಲ್ಲೆಯ ಸಂದರ್ಭದಲ್ಲಿ ಜಾತಿ ನಿಂದನೆ ಮಾಡಿದ್ದಲ್ಲದೆ, ಕೇತನ್ ಅವರ ಕಾಲುಗಳಿಗೆ ಮೊಳೆಗಳನ್ನು ಹೊಡೆದು ವಿಕೃತವಾಗಿ ಹಿಂಸಿಸಿದ್ದಾರೆ ಎಂದು ತಂದೆ ಧನಪಾಲ್ ಲಾಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆಸ್ಪತ್ರೆಗೆ ಸಾಗಿಸುವಾಗ ಕೇತನ್ ಅತ್ಯಂತ ಕಷ್ಟದಿಂದ ಮಾತನಾಡಿದ್ದು, ತನಗೆ ಆದ ಹಿಂಸೆಯನ್ನು ವಿವರಿಸಿದ್ದಾಗಿ ಅವರು ಕಣ್ಣೀರು ಹಾಕಿದ್ದಾರೆ. ಮೃತದೇಹದ ಮೇಲೂ ತೀವ್ರವಾದ ಗಾಯದ ಗುರುತುಗಳು ಮತ್ತು ಮೊಳೆ ಹೊಡೆದಂತಹ ರಂಧ್ರಗಳು ಕಂಡುಬಂದಿವೆ ಎಂದು ವರದಿಯಾಗಿದೆ.
ಸೋಮವಾರ ಮುಂಜಾನೆ ಹುಡುಗಿಯ ತಂದೆ ಯಶ್ಬೀರ್ ಸಿಂಗ್ ಪನ್ವಾರ್, ಧನಪಾಲ್ ಲಾಲ್ ಅವರಿಗೆ ಫೋನ್ ಮಾಡಿ ಬೆದರಿಕೆ ಹಾಕಿದ್ದು, “ನಿಮ್ಮ ಹುಡುಗರಿಗೆ ಸರಿಯಾಗಿ ಧರ್ಮದೇಟು ನೀಡಲಾಗಿದೆ, ಹೋಗಿ ಹಳ್ಳದ ಬಳಿ ಬಿದ್ದಿರುವ ಅವರ ಹೆಣಗಳನ್ನು ಎತ್ತಿಕೊಂಡು ಹೋಗಿ” ಎಂದು ಹೇಳಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ತಕ್ಷಣವೇ ಎಚ್ಚೆತ್ತ ಧನಪಾಲ್ ಅವರು ದಿವಾಕರ್ ಕುಟುಂಬಕ್ಕೆ ವಿಷಯ ಮುಟ್ಟಿಸಿ ಸ್ಥಳಕ್ಕೆ ಧಾವಿಸಿದಾಗ ಇಬ್ಬರೂ ರಕ್ತದ ಮಡುವಿನಲ್ಲಿ ಬಿದ್ದಿರುವುದು ಪತ್ತೆಯಾಗಿದೆ. ಗಂಭೀರ ಸ್ಥಿತಿಯಲ್ಲಿದ್ದ ಕೇತನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಕೇತನ್ ಮತ್ತು ಆ ಅಪ್ರಾಪ್ತ ಹುಡುಗಿ ಕಳೆದ ಆರು ತಿಂಗಳಿನಿಂದ ಸ್ನೇಹಿತರಾಗಿದ್ದರು. ಆದರೆ ಹುಡುಗಿಯ ಕುಟುಂಬಸ್ಥರು ಈ ಸ್ನೇಹಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು ಎಂದು ಪೊಲೀಸರು ಖಚಿತಪಡಿಸಿದ್ದಾರೆ. ತೆಹ್ರಿ ಗರ್ವಾಲ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ಶ್ವೇತಾ ಚೌಬೆ ಮಾತನಾಡಿ, “ಹುಡುಗಿಯ ತಂದೆ ಈ ಹಿಂದೆ ಕೇತನ್ ತಂದೆಯನ್ನು ಭೇಟಿಯಾಗಿ, ತನ್ನ ಮಗಳ ಸಂಪರ್ಕಕ್ಕೆ ಬಾರದಂತೆ ಮಗನಿಗೆ ತಿಳಿಹೇಳಲು ಎಚ್ಚರಿಸಿದ್ದರು. ಭಾನುವಾರ ರಾತ್ರಿ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದಾರೆ” ಎಂದು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹುಡುಗಿಯ ತಂದೆ ಯಶ್ಬೀರ್ ಸಿಂಗ್ ಪನ್ವಾರ್ ಮತ್ತು ಅಜ್ಜ ವಿದ್ಯಾದತ್ ಪನ್ವಾರ್ ಹಾಗೂ ಇತರ ಕೆಲವು ಅಪರಿಚಿತರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) ಸೆಕ್ಷನ್ 103(1) (ಕೊಲೆ), 3(5) (ಸಮಾನ ಉದ್ದೇಶ) ಮತ್ತು ಎಸ್ಸಿ/ಎಸ್ಟಿ ಕಾಯ್ದೆಯಡಿ ಎಫ್ಐಆರ್ ದಾಖಲಿಸಲಾಗಿದೆ. ಹೆಸರಿಸಲಾದ ಇಬ್ಬರು ಪ್ರಮುಖ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ. ವಿಧಿವಿಜ್ಞಾನ ಪ್ರಯೋಗಾಲಯದ (ಎಫ್ಎಸ್ಎಲ್) ತಂಡವು ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿದೆ.
ಈ ಘಟನೆಯು ಸ್ಥಳೀಯವಾಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮಾಜಿ ಗ್ರಾಮ ಪ್ರಧಾನ ದಿನೇಶ್ ಶಾ ಮಾತನಾಡಿ, “ಒಂದು ವೇಳೆ ಹುಡುಗರು ತಪ್ಪು ಮಾಡಿದ್ದರೆ, ಹುಡುಗಿಯ ಕುಟುಂಬಸ್ಥರು ಅವರ ಪೋಷಕರಿಗೆ ಅಥವಾ ಪೊಲೀಸರಿಗೆ ದೂರು ನೀಡಬೇಕಿತ್ತು. ಅದನ್ನು ಬಿಟ್ಟು ಕಾನೂನನ್ನು ಕೈಗೆಟುಕಿಕೊಂಡು ಯುವಕನನ್ನು ಹಿಂಸಿಸಿ ಕೊಲ್ಲುವ ಹಕ್ಕು ಅವರಿಗೆ ಕೊಟ್ಟವರು ಯಾರು?” ಎಂದು ಪ್ರಶ್ನಿಸಿದ್ದಾರೆ. ಭೀತಿಯಲ್ಲಿರುವ ಸಂತ್ರಸ್ತ ಕುಟುಂಬವು ತಮಗೆ ಪೊಲೀಸ್ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದೆ. ಗ್ರಾಮೀಣ ಉತ್ತರಾಖಂಡದಲ್ಲಿ ಅಂತರ್ಜಾತಿ ಸಂಬಂಧಗಳ ಸುತ್ತಲಿನ ಸಾಮಾಜಿಕ ಸೂಕ್ಷ್ಮತೆಗಳು ಮತ್ತು ದಲಿತರ ಮೇಲಿನ ದೌರ್ಜನ್ಯವನ್ನು ಈ ಘಟನೆ ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.
