ನವದೆಹಲಿ: ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (UAPA) ಅಡಿಯ ಪ್ರಕರಣಗಳಲ್ಲಿ ಸುದೀರ್ಘ ಜೈಲುವಾಸದ ಸಂದರ್ಭದಲ್ಲೂ ಜಾಮೀನು ನಿರಾಕರಿಸುವ ಧೋರಣೆಯ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. 2020 ರ ದೆಹಲಿ ಗಲಭೆ ಸಂಚಿನ ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತರಾದ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಅವರ ಸುದೀರ್ಘ ಬಂಧನದ ಹೊರಾಗಿಯೂ ಅವರಿಗೆ ಜಾಮೀನು ನಿರಾಕರಿಸಿದ್ದ ತನ್ನದೇ ಜನವರಿ 2026 ರ ‘ಗುಲ್ಫಿಶಾ ಫಾತಿಮಾ’ ತೀರ್ಪಿನ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಸೋಮವಾರ ಗಂಭೀರವಾಗಿ ಪ್ರಶ್ನಿಸಿದೆ. ವಿಚಾರಣೆ ವಿಳಂಬವಾಗುವ ಸಂದರ್ಭಗಳಲ್ಲಿ ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆಗಾಗಿ ಯುಎಪಿಎ ಅಡಿಯಲ್ಲೂ ಜಾಮೀನು ನೀಡಬಹುದು ಎಂಬ ಉನ್ನತ ಪೀಠದ ಆದೇಶವನ್ನು ಆ ತೀರ್ಪು ಸರಿಯಾಗಿ ಪಾಲಿಸಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ಹಂದ್ವಾರ ನಿವಾಸಿ ಸೈಯದ್ ಇಫ್ತಿಕಾರ್ ಅಂದ್ರಾಬಿ ಎಂಬುವವರಿಗೆ ಜಾಮೀನು ಮಂಜೂರು ಮಾಡುವ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಈ ಮಹತ್ವದ ವೀಕ್ಷಣೆ ಮಾಡಿದೆ. ಜಮ್ಮು ಕಾಶ್ಮೀರದ ಎನ್ಐಎ ನಾರ್ಕೋ-ಭಯೋತ್ಪಾದನೆ ಪ್ರಕರಣದಲ್ಲಿ ಅಂದ್ರಾಬಿ ಜೂನ್ 2020 ರಿಂದ ಅಂದರೆ ಸುಮಾರು 6 ವರ್ಷಗಳಿಂದ ಜೈಲಿನಲ್ಲಿದ್ದರು.
ಜನವರಿ 5, 2026 ರಂದು ಸುಪ್ರೀಂ ಕೋರ್ಟ್ನ ಇಬ್ಬರು ನ್ಯಾಯಮೂರ್ತಿಗಳ ಪೀಠವು ದೆಹಲಿ ಗಲಭೆ ಪ್ರಕರಣದ ಐದು ಜನ ಸಹ-ಆರೋಪಿಗಳಿಗೆ ಜಾಮೀನು ನೀಡಿತ್ತಾದರೂ, ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಅವರ ಅರ್ಜಿಯನ್ನು ತಿರಸ್ಕರಿಸಿತ್ತು. ಅವರಿಬ್ಬರು ಗಲಭೆಯ “ಮುಖ್ಯ ಸೂತ್ರಧಾರಿಗಳು” ಎಂದು ಪ್ರಾಸಿಕ್ಯೂಷನ್ ಬಿಂಬಿಸಿದ್ದನ್ನು ಕೋರ್ಟ್ ಒಪ್ಪಿತ್ತು. ಆದರೆ, ಇಂದಿನ ಪೀಠವು ಈ ನಿರ್ಧಾರವು 2021 ರ ‘ಕೇಂದ್ರ ಸರ್ಕಾರ ವರ್ಸಸ್ ಕೆ.ಎ. ನಜೀಬ್’ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ನ ಮೂವರು ನ್ಯಾಯಮೂರ್ತಿಗಳ ಉನ್ನತ ಪೀಠ ನೀಡಿದ್ದ ಬದ್ಧ ತೀರ್ಪಿಗೆ ವಿರುದ್ಧವಾಗಿದೆ ಎಂದು ಸ್ಪಷ್ಟಪಡಿಸಿದೆ.
ಯುಎಪಿಎ ಕಾಯ್ದೆಯಡಿ ಕಠಿಣ ನಿಯಮಗಳಿದ್ದರೂ, ವಿಚಾರಣೆ ಪೂರ್ಣಗೊಳ್ಳುವುದು ತಡವಾದರೆ ಸಂವಿಧಾನದ ವಿಧಿ 21 ರ ಅಡಿಯಲ್ಲಿ ನಾಗರಿಕರಿಗೆ ಸಿಗಬೇಕಾದ ಬದುಕುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ನಜೀಬ್ ಪ್ರಕರಣದಲ್ಲಿ ಹೇಳಲಾಗಿತ್ತು. ಯುಎಪಿಎ ಕಾಯ್ದೆಯಡಿಯೂ “ಜಾಮೀನು ನೀಡುವುದು ನಿಯಮ, ಜೈಲು ವಿನಾಯಿತಿ” ( “Bail is the rule, jail is the exception” )ಎಂಬ ಸಾಂವಿಧಾನಿಕ ತತ್ವ ಅನ್ವಯವಾಗುತ್ತದೆ. ಕೆಳಮಟ್ಟದ ಅಥವಾ ಸಮಾನ ಪೀಠಗಳು ಉನ್ನತ ಪೀಠದ ಆದೇಶಗಳನ್ನು ಕಡೆಗಣಿಸುವಂತಿಲ್ಲ ಎಂದು ನ್ಯಾಯಾಧೀಶರು ಜ್ಞಾಪಿಸಿದ್ದಾರೆ.
ರಾಷ್ಟ್ರೀಯ ಮಟ್ಟದಲ್ಲಿ ಯುಎಪಿಎ ಪ್ರಕರಣಗಳಲ್ಲಿ ಶಿಕ್ಷೆಯಾಗುವ ಪ್ರಮಾಣ ಕೇವಲ ಶೇಕಡಾ 6 ರಷ್ಟಿದೆ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಇದು ಶೇಕಡಾ 1 ಕ್ಕಿಂತಲೂ ಕಡಿಮೆ ಇದೆ ಎಂಬ ಅಧಿಕೃತ ಅಂಕಿಅಂಶಗಳನ್ನು ಸುಪ್ರೀಂ ಕೋರ್ಟ್ ಉಲ್ಲೇಖಿಸಿದೆ. ಇಂತಹ ಸಂದರ್ಭಗಳಲ್ಲಿ ವಿಚಾರಣೆಯೇ ಆರಂಭವಾಗದೆ ವರ್ಷಗಟ್ಟಲೆ ಜನರನ್ನು ಜೈಲಿನಲ್ಲಿಡುವುದು ಶಿಕ್ಷೆಗೆ ಸಮಾನವಾಗುತ್ತದೆ ಎಂದು ನ್ಯಾಯಾಲಯ ಆತಂಕ ವ್ಯಕ್ತಪಡಿಸಿದೆ. ಕೇವಲ ಗಂಭೀರ ಆರೋಪ ಹೊರಿಸಲಾಗಿದೆ ಎಂಬ ಕಾರಣಕ್ಕೆ ಸುದೀರ್ಘ ಕಾಲ ವಿಚಾರಣೆಯಿಲ್ಲದೆ ಬಂಧನದಲ್ಲಿಡುವುದು ಕಾನೂನುಬಾಹಿರ ಎಂದು ಕೋರ್ಟ್ ಪುನರುಚ್ಚರಿಸಿದೆ.
ಸದ್ಯ ಸೈಯದ್ ಇಫ್ತಿಕಾರ್ ಅಂದ್ರಾಬಿ ಅವರಿಗೆ ಪಾಸ್ಪೋರ್ಟ್ ಒಪ್ಪಿಸುವುದು ಸೇರಿದಂತೆ ಕೆಲವು ಷರತ್ತುಗಳೊಂದಿಗೆ ಬಿಡುಗಡೆಗೆ ಆದೇಶಿಸಲಾಗಿದೆ. ಇಂದಿನ ಸುಪ್ರೀಂ ಕೋರ್ಟ್ ಅಭಿಪ್ರಾಯವು ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಅವರ ಪ್ರಕರಣದ ತಕ್ಷಣ ಮರುಪರಿಶೀಲನೆಗೆ ಕಾರಣವಾಗುವುದಿಲ್ಲವಾದರೂ, ಭವಿಷ್ಯದಲ್ಲಿ ಅವರು ಸಲ್ಲಿಸುವ ಜಾಮೀನು ಅರ್ಜಿಗಳಿಗೆ ಮತ್ತು ದೇಶಾದ್ಯಂತ ಜೈಲಿನಲ್ಲಿರುವ ಇತರ ಯುಎಪಿಎ ವಿಚಾರಣಾಧೀನ ಕೈದಿಗಳಿಗೆ ದೊಡ್ಡ ಕಾನೂನು ಆಸರೆಯಾಗಲಿದೆ ಎಂದು ಕಾನೂನು ತಜ್ಞರು ವಿಶ್ಲೇಷಿಸಿದ್ದಾರೆ.
