ವರದಿಗಾರ-ಮೇ 11: ರಾಜ್ಯ ರಾಜಕೀಯ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ನೀಡಿದ ಹೇಳಿಕೆಗಳಿಗೆ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ತಿರುಗೇಟು ನೀಡಿದ್ದಾರೆ. ಪ್ರಧಾನಿ ರಾಷ್ಟ್ರೀಯ ವಿಷಯಗಳಿಗೆ ಆದ್ಯತೆ ನೀಡಬೇಕು ಹೊರತು ರಾಜ್ಯ ಮಟ್ಟದ ರಾಜಕೀಯ ಚರ್ಚೆಗಳಲ್ಲಿ ತಲೆಹಾಕಬಾರದು ಎಂದು ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಹರಿಪ್ರಸಾದ್, ದೇಶದ ಆರ್ಥಿಕ ಪರಿಸ್ಥಿತಿ, ಇಂಧನ ಬಳಕೆ ಮತ್ತು ಚಿನ್ನ ಖರೀದಿ ಕುರಿತು ನೀಡಲಾಗಿರುವ ಸಲಹೆಗಳ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕಿದೆ ಎಂದು ಅಭಿಪ್ರಾಯಪಟ್ಟರು. ಜನರಿಗೆ ಮಿತವ್ಯಯದ ಕರೆ ನೀಡುವ ಮೊದಲು ಆಡಳಿತ ತನ್ನ ಹೊಣೆಗಾರಿಕೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಅವರು ಹೇಳಿದರು.
ಜಾಗತಿಕ ಸವಾಲುಗಳ ನಡುವೆಯೂ ದೇಶದ ಆರ್ಥಿಕ ಸ್ಥಿರತೆಯನ್ನು ಕಾಪಾಡಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವುದು ಸರ್ಕಾರದ ಕರ್ತವ್ಯ ಎಂದು ಅವರು ಸೂಚಿಸಿದರು. ರಾಜಕೀಯ ಆರೋಪ-ಪ್ರತ್ಯಾರೋಪಗಳಿಗಿಂತ ಆಡಳಿತದ ಸ್ಪಷ್ಟ ದಿಕ್ಕು ಮತ್ತು ನೀತಿಗಳೇ ಮುಖ್ಯ ಎಂದು ಅವರು ಅಭಿಪ್ರಾಯಪಟ್ಟರು.
ನರೇಂದ್ರ ಮೋದಿಯನ್ನು ನಾನು ಯಾವಾಗ ಬೇಕಾದರೂ ಇಳಿಸಬಹುದು ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ. ಎಪ್ಸ್ಟೀನ್ ಫೈಲ್ಸ್ ನಲ್ಲಿ ಇವರ ಲೀಲೆಗಳು ಹೊರಗಡೆ ಬರುತ್ತೆ. ಆಗ ಕುರ್ಚಿ ಹೇಗೆ ಉಳಿಸಿಕೊಳ್ಳುತ್ತಾರೆ ಎಂದು ಜನರಿಗೆ ಹೇಳಿದರೆ ಒಳ್ಳೆಯದು. ಮೊದಲು ಅದಕ್ಕೆ ಉತ್ತರ ಕೊಡಲಿ. ಈಗ ಗುಜರಾತ್ ಮಾಡೆಲ್ ಮರೆತು ಬಿಟ್ಟಿದ್ದಾರೆ. 12 ವರ್ಷಗಳಲ್ಲಿ ಅರಾಜಕತೆ ಸೃಷ್ಟಿ ಮಾಡಿದವರು ಇವರು ಎಂದು ಹರಿಪ್ರಸಾದ್ ಕಿಡಿಗಾರಿದ್ದಾರೆ.
ಬಿಹಾರದಲ್ಲಿ ನಿತೀಶ್ ಕುಮಾರ್, ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ, ಎನ್ಸಿಪಿ, ಪಂಜಾಬ್ನಲ್ಲಿ ಪ್ರಕಾಶ್ಸಿಂಗ್ ಬಾದಲ್ ಅವರನ್ನು ಯಾವ ರೀತಿ ಮುಗಿಸಿದರು. ಇದಕ್ಕೆಲ್ಲ ಕಾರಣ ಭಸ್ಮಾಸುರ ಆಗಿರುವ ನರೇಂದ್ರ ಮೋದಿ. ಅವರು ಪ್ರಜಾಪ್ರಭುತ್ವ, ಸಂವಿಧಾನದ ಮೇಲೆ ಕೈ ಇಡದಿದ್ದರೆ ಸಾಕು ಎಂದು ಹರಿಪ್ರಸಾದ್ ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
