ವರದಿಗಾರ-ಮೇ.06: ಕರ್ನಾಟಕ ಸರ್ಕಾರವು ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ ಮಾಡಿದ್ದು, 3 ಹಿರಿಯ ಐಪಿಎಸ್ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಬುಧವಾರ ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಹಿರಿಯ ಪೊಲೀಸ್ ಅಧಿಕಾರಿಗಳಾದ ಸಂದೀಪ್ ಪಾಟೀಲ್, ಡಾ. ಚೇತನ್ ಸಿಂಗ್ ರಾಥೋರ್, ಅನುಪಮ್ ಅಗರ್ವಾಲ್ ಅವರ ವರ್ಗಾವಣೆಯಾಗಿದೆ.
ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್ಆರ್ಪಿ) ಪಡೆಯ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ಐಜಿಪಿ) ಆಗಿದ್ದ ಹಿರಿಯ ಅಧಿಕಾರಿ ಸಂದೀಪ್ ಪಾಟೀಲ್ ಅವರನ್ನು, ಬೆಳಗಾವಿ ಕೇಂದ್ರ ಕಚೇರಿಯ ಉತ್ತರ ವಲಯದ ಐಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ. ಇವರು ಡಾ. ಚೇತನ್ ಸಿಂಗ್ ರಾಥೋರ್ ಅವರಿಂದ ತೆರವಾದ ಸ್ಥಾನಕ್ಕೆ ನಿಯೋಜನೆಗೊಂಡಿದ್ದಾರೆ.
ಬೆಳಗಾವಿಯ ಉತ್ತರ ವಲಯದ ಐಜಿಪಿಯಾಗಿದ್ದ ಡಾ. ಚೇತನ್ ಸಿಂಗ್ ರಾಥೋರ್ ಅವರನ್ನು, ಸಿಐಡಿ ವಿಭಾಗದ ಆರ್ಥಿಕ ಅಪರಾಧಗಳ ಐಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ. ಈ ಹುದ್ದೆಯು ಈ ಮೊದಲು ಖಾಲಿಯಿತ್ತು.
ಹುದ್ದೆಯ ನಿರೀಕ್ಷೆಯಲ್ಲಿದ್ದ ಅಧಿಕಾರಿ ಅನುಪಮ್ ಅಗರ್ವಾಲ್ ಅವರನ್ನು, ಸಂದೀಪ್ ಪಾಟೀಲ್ ಅವರ ವರ್ಗಾವಣೆಯಿಂದಾಗಿ ಖಾಲಿಯಾದ ಹಾಗೂ ಮೇಲ್ದರ್ಜೆಗೇರಿಸಲಾದ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್ಆರ್ಪಿ) ಪಡೆಯ ಐಜಿಪಿಯಾಗಿ ನೇಮಿಸಲಾಗಿದೆ.
ಈ ಆದೇಶದಲ್ಲಿ, ಕೆಎಸ್ಆರ್ಪಿ ಐಜಿಪಿ ಹುದ್ದೆಯನ್ನು ‘ಪೊಲೀಸ್ ಕಂಪ್ಯೂಟರ್ ವಿಭಾಗದ ಐಜಿಪಿ’ ಹುದ್ದೆಯ ಸ್ಥಾನಮಾನ ಮತ್ತು ಜವಾಬ್ದಾರಿಗಳಿಗೆ ಸಮಾನವಾದ ಹುದ್ದೆ ಎಂದು ಘೋಷಿಸಲಾಗಿದೆ. ರಾಜ್ಯಪಾಲರ ಆದೇಶದ ಮೇರೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಡಿಪಿಎಆರ್) ಅಧೀನ ಕಾರ್ಯದರ್ಶಿ ಸಂಜಯ್ ಬಿ.ಎಸ್. ಅವರು ಈ ವರ್ಗಾವಣೆ ಅಧಿಸೂಚನೆಯನ್ನು ಹೊರಡಿಸಿದ್ದಾರೆ.
