ವರದಿಗಾರ-ಮೇ.05: 2026ರ ವಿಧಾನಸಭಾ ಚುನಾವಣೆಯ ಫಲಿತಾಂಶಗಳ ಬಳಿಕ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಮಂಗಳವಾರ ರಾಜೀನಾಮೆ ನೀಡುವುದನ್ನು ಸ್ಪಷ್ಟವಾಗಿ ನಿರಾಕರಿಸಿ, ನಾವು ಚುನಾವಣೆಯಲ್ಲಿ ಸೋತಿಲ್ಲ, ರಾಜೀನಾಮೇ ನೀಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಚುನಾವಣಾ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ, ಹಿಂಸಾಚಾರ ಉಂಟಾಗಿದೆ ಮತ್ತು ಅಧಿಕಾರಿಗಳು ಪಕ್ಷಪಾತದಿಂದ ವರ್ತಿಸಿದ್ದಾರೆ ಎಂದು ಅವರು ಆರೋಪಿಸಿದ್ದು, ರಾಜೀನಾಮೆ ನೀಡುವುದನ್ನು ನಿರಾಕರಿಸಿದ್ದಾರೆ.
“ನನ್ನ ರಾಜೀನಾಮೆಯ ಪ್ರಶ್ನೆಯೇ ಇಲ್ಲ. ನಾವು ಚುನಾವಣೆಯಲ್ಲಿ ಸೋತಿಲ್ಲ. ತಮ್ಮ ಪಕ್ಷಕ್ಕೆ ನೈತಿಕ ಗೆಲುವು ದೊರೆತಿದೆ ಎಂದು ಮಮತಾ ಬ್ಯಾನರ್ಜಿ ಅವರು ಹೇಳಿದ್ದಾರೆ. ಚುನಾವಣಾ ಆಯೋಗದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, “ನಮ್ಮ ಹೋರಾಟ ಬಿಜೆಪಿಯೊಂದಿಗೆ ಅಲ್ಲ, ಚುನಾವಣಾ ಆಯೋಗದೊಂದಿಗೆ. ಬಿಜೆಪಿ ಚುನಾವಣಾ ಆಯೋಗವನ್ನು ಬಳಸಿಕೊಂಡು ಯೋಜಿತವಾಗಿ ಕೆಲಸ ಮಾಡಿದೆ. ಇದು ಪ್ರಜಾಪ್ರಭುತ್ವದ ಕ್ರೂರ ಕೊಲೆ,” ಎಂದು ಆಕ್ರೋಶ ಹೊರಹಾಕಿದ್ದಾರೆ.
“ಅವರು ನ್ಯಾಯಸಮ್ಮತವಾಗಿ ಗೆದ್ದಿದ್ದರೆ ನಾನು ದೂರು ನೀಡುತ್ತಿರಲಿಲ್ಲ. ಆದರೆ ನಾವು ಸೋತಿಲ್ಲ; ನಮ್ಮ ಗೆಲುವನ್ನು ಕಸಿದುಕೊಳ್ಳಲಾಗಿದೆ ,” ಎಂದು ಖಾರವಾಗಿಯೇ ಹೇಳಿಕೆ ನೀಡಿದ್ದಾರೆ.ಚುನಾವಣಾ ಪ್ರಚಾರ ಮತ್ತು ಮತ ಎಣಿಕೆ ಅವಧಿಯಲ್ಲಿ ವ್ಯಾಪಕ ಹಿಂಸಾಚಾರ ನಡೆದಿದೆ ಎಂದು ಆರೋಪಿಸಿದ ಅವರು, “ಮೊದಲ ಸುತ್ತಿನ ನಂತರ ಬಿಜೆಪಿ ಹೆಚ್ಚು ಸ್ಥಾನಗಳನ್ನು ಪಡೆಯುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿದವು. ಆ ಬಳಿಕ ಬಿಜೆಪಿ, ಬೂತ್ಗಳಿಗೆ ನುಗ್ಗಿ ನಮ್ಮ ಕಾರ್ಯಕರ್ತರ ಮೇಲೆ ದಾಳಿ ಆರಂಭಿಸಿತು,”
“ಬಿಜೆಪಿ ಗೂಂಡಾಗಳೊಂದಿಗೆ ದೌರ್ಜನ್ಯ ನಡೆಸಿತು. ಪೊಲೀಸರು ಸಂಪೂರ್ಣ ನಿಷ್ಕ್ರಿಯರಾಗಿದ್ದರು. ನಮ್ಮ ಜನರನ್ನು ಹಿಂಸಿಸಲಾಯಿತು. ಎಸ್ಸಿ ಮತ್ತು ಎಸ್ಟಿ ಕುಟುಂಬಗಳ ಮೇಲೂ ದಾಳಿ ನಡೆದಿದೆ, ಮಹಿಳೆಯರಿಗೆ ಅತ್ಯಾಚಾರದ ಬೆದರಿಕೆ ಹಾಕಲಾಗಿದೆ” ಎಂದು ಆರೋಪಿಸಿದ್ದಾರೆ. ಕೇಂದ್ರ ಪಡೆಗಳ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದ ಅವರು, ‘ಇದು ಜವಾನರ ಪಡೆಯಾ ಅಥವಾ ಗೂಂಡಾಗಳ ಪಡೆಯಾ? ಇಂತಹ ವರ್ತನೆ ಎಂದಿಗೂ ಕಂಡಿಲ್ಲ,’ ಎಂದು ಪ್ರತಿಕ್ರಿಯಿಸಿದ್ದಾರೆ.
