ವರದಿಗಾರ-ಮೇ.05: ಪಶ್ಚಿಮ ಬಂಗಾಳದಲ್ಲಿ 15 ವರ್ಷಗಳ ಸುದೀರ್ಘ ಆಡಳಿತ ನಡೆಸಿದ್ದ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಇದೀಗ ಸೋತಿದೆ. ಬರೋಬ್ಬರಿ 206 ಸ್ಥಾನಗಳನ್ನು ಗೆದ್ದುಕೊಂಡಿರುವ ಬಿಜೆಪಿ, ಬಂಗಾಳದಲ್ಲಿ ಮೊಟ್ಟಮೊದಲ ಬಾರಿಗೆ ಅಧಿಕಾರದ ಗದ್ದುಗೆ ಏರುತ್ತಿದೆ.
ಆದರೆ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷದ ಸೋಲನ್ನು ಕೆಲವು ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟದಲ್ಲಿರುವ ಅನ್ಯ ವಿಪಕ್ಷಗಳ ನಾಯಕರು ಸಂಭ್ರಮಿಸುತ್ತಿದ್ದಾರೆ. ಇವರ ವಿರುದ್ಧ ಗುಡುಗಿರುವ ಲೋಕಸಭೆ ಪ್ರತಿಪಕ್ಷ ನಾಯಕ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಮಮತಾ ಅವರ ಸೋಲಿನ ಖುಷಿಗಿಂತ ಬಿಜೆಪಿ ಗೆಲುವು ಹೆಚ್ಚು ಆತಂಕಕಾರಿಯಾಗಿದೆ ಎಂದು ಹೇಳಿದ್ದಾರೆ.
ಈ ಕುರಿತು ತಮ್ಮ ಅಧಿಕೃತ ಎಕ್ಸ್ ಅಕೌಂಟ್ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, “ಕಾಂಗ್ರೆಸ್ನ ಕೆಲವರು ಮತ್ತು ಇತರರು ಟಿಎಂಸಿಯ ಸೋಲಿನ ಬಗ್ಗೆ ಸಂತೋಷಪಡುತ್ತಿದ್ದಾರೆ. ಅವರು ಒಂದು ವಿಷಯ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು. ಅಸ್ಸಾಂ ಮತ್ತು ಬಂಗಾಳದ ಜನಾದೇಶದ ಕಳ್ಳತನವು, ಭಾರತೀಯ ಪ್ರಜಾಪ್ರಭುತ್ವವನ್ನು ನಾಶಮಾಡುವ ತನ್ನ ಧ್ಯೇಯದಲ್ಲಿ ಬಿಜೆಪಿಯ ದೊಡ್ಡ ಹೆಜ್ಜೆಯಾಗಿದೆ. ಸಣ್ಣ ರಾಜಕೀಯವನ್ನು ಬದಿಗಿಡಿ. ಇದು ಒಂದು ಅಥವಾ ಇನ್ನೊಂದು ಪಕ್ಷದ ಬಗ್ಗೆ ಅಲ್ಲ. ಇದು ಭಾರತದ ಬಗ್ಗೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
