ವರದಿಗಾರ-ಮೇ.05: ಟಿವಿಕೆ ಮುಖ್ಯಸ್ಥ, ಖ್ಯಾತ ನಟ ದಳಪತಿ ವಿಜಯ್ ಮಂಗಳವಾರ ಪಕ್ಷದ ನೂತನ ಶಾಸಕರ ಸಭೆಯನ್ನು ನಡೆಸಿದ್ದು,ಇದಕ್ಕೂ ಮುನ್ನ ಪಕ್ಷದ ಸೈದ್ಧಾಂತಿಕ ನಾಯಕರಿಗೆ ಗೌರವ ನಮನಗಳನ್ನು ಸಲ್ಲಿಸಿದರು. ತಮಿಳುನಾಡು ವಿಧಾನಸಭಾ ಚುನಾವಣಾ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು,108 ಸ್ಥಾನಗಳನ್ನು ಗೆದ್ದಿರುವ ಟಿವಿಕೆ ಏಕೈಕ ದೊಡ್ಡ ಪಕ್ಷವಾಗಿ ಮೂಡಿಬಂದಿದ್ದು ರಾಷ್ಟ್ರದಾದ್ಯಂತ ರಾಜಕೀಯ ಕ್ರಾಂತಿ ನಿರ್ಮಿಸಿ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ
ಟಿವಿಕೆ ಕೇಂದ್ರ ಕಚೇರಿಗೆ ಆಗಮಿಸಿದ ವಿಜಯ್ ಅವರಂತೆ ಮೊದಲ ಬಾರಿಗೆ ಆಯ್ಕೆಯಾದ ಹಲವಾರು ಶಾಸಕರು ಮತ್ತು ಪಕ್ಷದ ಕಾರ್ಯಕರ್ತರು ಭರ್ಜರಿ ಸ್ವಾಗತವನ್ನು ನೀಡಿ ಅಭಿನಂದಿಸಿದ್ದಾರೆ.
ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಮತ್ತು ವಿಧಾನಸಭೆಯಲ್ಲಿ ಶಾಸಕರ ನಡೆನುಡಿಗಳ ಕುರಿತು ಚರ್ಚೆಗಳು ನಡೆದವು ಎಂದು ಶಾಸಕರೋರ್ವರು ಮಾಹಿತಿ ನೀಡಿದ್ದಾರೆ. ಸಭೆಗೂ ಮುನ್ನ ವಿಜಯ್ ಪಕ್ಷದ ಸೈದ್ಧಾಂತಿಕ ನಾಯಕರಾದ ಪೆರಿಯಾರ್ ಇ.ವಿ.ರಾಮಸ್ವಾಮಿ,ಬಿ.ಆರ್.ಅಂಬೇಡ್ಕರ್, ಕೆ.ಕಾಮರಾಜ,ವೇಲು ನಾಚಿಯಾರ್ ಮತ್ತು ಅಂಜಲೈ ಅಮ್ಮಾಳ್ ಅವರ ಪ್ರತಿಮೆಗಳಿಗೆ ಪುಷ್ಪ ನಮನಗಳನ್ನು ಸಲ್ಲಿಸಿ ಗೌರವ ಸಲ್ಲಿಸಿದ್ದಾರೆ. ಸಭೆಯಲ್ಲಿ ಶಾಸಕರು ತಮ್ಮ ಗೆಲುವಿನ ಪ್ರಮಾಣಪತ್ರಗಳನ್ನು ವಿಜಯ್ ಅವರಿಗೆ ಸಲ್ಲಿಸುವ ಜೊತೆಗೆ ಸರಕಾರ ರಚನೆಗೆ ಕಾರ್ಯತಂತ್ರಗಳನ್ನು ಚರ್ಚಿಸಿದರು ಎಂದು ಟಿವಿಕೆ ನಾಯಕ ನಂಜಿಲ್ ಸಂಪತ್ ಹೇಳಿದ್ದಾರೆ
ಸರಕಾರ ನಡೆಸಲು ಟಿವಿಕೆಗೆ 10 ಸ್ಥಾನಗಳ ಕೊರತೆಯಿದ್ದು, ಸರಳ ಬಹುಮತವನ್ನು ಹೇಗೆ ಪಡೆಯಲಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಸಂಪತ್, ‘ಅದನ್ನು ಪಕ್ಷದ ನಾಯಕರು ಸಾಧಿಸಲಿದ್ದಾರೆ. ಸಕಾರಾತ್ಮಕ ಫಲಿತಾಂಶದ ಬಗ್ಗೆ ನನಗೆ ವಿಶ್ವಾಸವಿದೆ. ನೀವು ಶೀಘ್ರವೇ ಶುಭ ಸುದ್ದಿಯನ್ನು ನಿರೀಕ್ಷಿಸಬಹುದು ’ ಎಂದು ಉತ್ತರಿಸಿದರು.
