ನವದೆಹಲಿ: ಕಾನೂನುಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆಯಡಿಯಲ್ಲಿ (UAPA) ಬಂಧನಕ್ಕೊಳಗಾಗುವವರ ಸಂಖ್ಯೆ ಹೆಚ್ಚುತ್ತಿದ್ದರೂ, ನ್ಯಾಯಾಲಯದಲ್ಲಿ ಆರೋಪ ಸಾಬೀತಾಗಿ ಶಿಕ್ಷೆಯಾಗುವ ಪ್ರಮಾಣ ಮಾತ್ರ ದೇಶಾದ್ಯಂತ ಅತ್ಯಂತ ಕಡಿಮೆಯಾಗಿದೆ ಎಂದು ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಮಾದಕವಸ್ತು ಪೂರೈಕೆ – ಭಯೋತ್ಪಾದನೆ ಪ್ರಕರಣವೊಂದರಲ್ಲಿ ಸುದೀರ್ಘ ಕಾಲ ಜೈಲಿನಲ್ಲಿದ್ದ ಆರೋಪಿಗೆ ಜಾಮೀನು ಮಂಜೂರು ಮಾಡುವ ಸಂದರ್ಭದಲ್ಲಿ, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಬಿಡುಗಡೆ ಮಾಡಿರುವ ಅಧಿಕೃತ ಅಂಕಿ-ಅಂಶಗಳನ್ನು ಸರ್ವೋಚ್ಚ ನ್ಯಾಯಾಲಯ ಉಲ್ಲೇಖಿಸಿದೆ. ತನಿಖಾ ಸಂಸ್ಥೆಗಳು ಕಠಿಣ ಕಾನೂನುಗಳ ಅಡಿಯಲ್ಲಿ ದಾಖಲಿಸುವ ಪ್ರಕರಣಗಳು ಅಂತಿಮವಾಗಿ ನ್ಯಾಯಾಲಯದಲ್ಲಿ ಹೇಗೆ ಬದಲಾಗುತ್ತವೆ ಎಂಬುದಕ್ಕೆ ಈ ಅಂಕಿ-ಅಂಶಗಳು ಕನ್ನಡಿ ಹಿಡಿದಿವೆ.
ಕೇಂದ್ರ ಗೃಹ ಸಚಿವಾಲಯವು ಸಂಸತ್ತಿನಲ್ಲಿ ಮಂಡಿಸಿರುವ ಎನ್ಸಿಆರ್ಬಿ ವರದಿಗಳ ಪ್ರಕಾರ, 2019 ರಿಂದ 2023 ರವರೆಗಿನ ಐದು ವರ್ಷಗಳ ಅವಧಿಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಯುಎಪಿಎ ಪ್ರಕರಣಗಳ ಒಟ್ಟು ಶಿಕ್ಷೆಯ ಪ್ರಮಾಣ (Conviction Rate) ಕೇವಲ ಕನಿಷ್ಠ 1.5% ರಿಂದ ಗರಿಷ್ಠ 4% ರಷ್ಟಿದೆ. ಇನ್ನು ಭಯೋತ್ಪಾದನಾ ಪೀಡಿತ ಪ್ರದೇಶ ಎನ್ನಲಾಗುವ ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಪ್ರಮಾಣ ಸತತವಾಗಿ 1% ಕ್ಕಿಂತಲೂ ಕೆಳಗಿದೆ. ವಿಶೇಷವೆಂದರೆ, 2019 ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಯುಎಪಿಎ ಅಡಿಯಲ್ಲಿ ಒಬ್ಬರಿಗೂ ಶಿಕ್ಷೆಯಾಗಿರಲಿಲ್ಲ (0%) ಮತ್ತು 2022 ರಲ್ಲಿ ದಾಖಲಾದ 0.89% ಶಿಕ್ಷೆಯ ಪ್ರಮಾಣವೇ ಅಲ್ಲಿನ ಐದು ವರ್ಷಗಳ ಗರಿಷ್ಠ ಸಾಧನೆಯಾಗಿದೆ!
ಸಂಸತ್ತಿಗೆ ಸಲ್ಲಿಕೆಯಾಗಿರುವ ಅಧಿಕೃತ ಮಾಹಿತಿಯ ಪ್ರಕಾರ, 2019-2023 ರ ಅವಧಿಯಲ್ಲಿ ದೇಶಾದ್ಯಂತ ಯುಎಪಿಎ ಕಾಯ್ದೆಯಡಿ ಒಟ್ಟು 10,440 ಜನರನ್ನು ಬಂಧಿಸಲಾಗಿತ್ತು. ಆದರೆ ಈ ಪೈಕಿ ಕೇವಲ 335 ಜನರಿಗೆ ಮಾತ್ರ ನ್ಯಾಯಾಲಯದಲ್ಲಿ ಶಿಕ್ಷೆ ವಿಧಿಸಲು ಸಾಧ್ಯವಾಗಿದೆ. ಅಂದರೆ ಒಟ್ಟಾರೆ ಶಿಕ್ಷೆಯ ಪ್ರಮಾಣ ಕೇವಲ 3.2% ಮಾತ್ರ. ಇನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಇದೇ ಅವಧಿಯಲ್ಲಿ ಭಾರಿ ಪ್ರಮಾಣದಲ್ಲಿ ಅಂದರೆ 3,662 ಜನರನ್ನು ಬಂಧಿಸಲಾಗಿದ್ದರೂ, ಶಿಕ್ಷೆಯಾಗಿರುವುದು ಕೇವಲ 23 ಜನರಿಗೆ ಮಾತ್ರ ಎಂಬ ಆಘಾತಕಾರಿ ಸತ್ಯ ಹೊರಬಿದ್ದಿದೆ.
ಈ ಕಣ್ಣು ತೆರೆಸುವ ಅಂಕಿ-ಅಂಶಗಳನ್ನು ಮುಂದಿಟ್ಟುಕೊಂಡೇ ಸುಪ್ರೀಂ ಕೋರ್ಟ್ ಪ್ರಾಸಿಕ್ಯೂಷನ್ ಮತ್ತು ತನಿಖಾ ಸಂಸ್ಥೆಗಳ ಧೋರಣೆಯನ್ನು ಪ್ರಶ್ನಿಸಿದೆ. ಯುಎಪಿಎ ಅಡಿಯಲ್ಲಿ ಬಂಧಿತರಾದವರು ವಿಚಾರಣೆ ಮುಗಿಯುವ ಹೊತ್ತಿಗೆ ದೋಷಮುಕ್ತರಾಗುವ ಸಾಧ್ಯತೆ ಶೇಕಡಾ 96 ಕ್ಕಿಂತಲೂ ಹೆಚ್ಚಿರುತ್ತದೆ. ಇಂತಹ ಪರಿಸ್ಥಿತಿ ಇರುವಾಗ, ಕೇವಲ ಗಂಭೀರ ಆರೋಪ ಹೊರಿಸಲಾಗಿದೆ ಎಂಬ ಕಾರಣಕ್ಕೆ ವಿಚಾರಣೆ ಆರಂಭವಾಗುವ ಮುನ್ನವೇ ಆರೋಪಿಗಳನ್ನು ಸುದೀರ್ಘ ಕಾಲ ಜೈಲಿನಲ್ಲಿಡುವುದು ಅವರ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಸುಧಾರಣೆಯಾಗದ ತನಿಖಾ ವ್ಯವಸ್ಥೆ
ಡಿಸೆಂಬರ್ 2025 ರಲ್ಲಿ ಲೋಕಸಭೆಯಲ್ಲಿ ಗೃಹ ಸಚಿವಾಲಯವೇ ಮಂಡಿಸಿದ ಈ ಅಂಕಿ-ಅಂಶಗಳು, ದೇಶದ ಪ್ರಮುಖ ತನಿಖಾ ಸಂಸ್ಥೆಗಳಾದ ಎನ್ಐಎ ಮತ್ತು ರಾಜ್ಯ ಪೊಲೀಸರ ತನಿಖಾ ಗುಣಮಟ್ಟದ ಮೇಲೆಯೇ ಪ್ರಶ್ನೆಗಳನ್ನು ಎಬ್ಬಿಸಿವೆ. ಯುಎಪಿಎ ಕಾಯ್ದೆಯಲ್ಲಿ ಜಾಮೀನು ಸಿಗುವುದು ಅತ್ಯಂತ ಕಠಿಣವಾಗಿರುವುದರಿಂದ, ತನಿಖಾ ಸಂಸ್ಥೆಗಳು ಸಾಕ್ಷ್ಯಾಧಾರಗಳ ಕೊರತೆಯಿದ್ದರೂ ಸುಲಭವಾಗಿ ಈ ಕಾಯ್ದೆಯನ್ನು ಬಳಸುತ್ತಿವೆ ಎಂಬ ಆರೋಪಗಳಿಗೆ ಈ ಅಂಕಿ-ಅಂಶಗಳು ಪುಷ್ಟಿ ನೀಡಿದೆ.
