ವರದಿಗಾರ-ಮೇ.06: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ (2026) ಅಭೂತಪೂರ್ವ ಮತ್ತು ದಾಖಲೆಯ ಗೆಲುವು ಸಾಧಿಸಿರುವ ನಟ ದಳಪತಿ ವಿಜಯ್ ನೇತೃತ್ವದ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಸರ್ಕಾರ ರಚಿಸಲು ಕಾಂಗ್ರೆಸ್ ಬೆಂಬಲ ಘೋಷಿಸಿದೆ. ವಿಜಯ್ ಮನವಿ ಮೇರೆಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್ಸಿ) ಷರತ್ತುಬದ್ದ ಬೆಂಬಲ ನೀಡಿರುವುದಾಗಿ ಪಕ್ಷ ತಿಳಿಸಿದೆ.
ನಟ ವಿಜಯ್ ಸ್ಥಾಪಿಸಿದ ಟಿವಿಕೆ ಪಕ್ಷವು ಮೊದಲ ಚುನಾವಣೆಯಲ್ಲಿ ತಮಿಳುನಾಡಿನ ಯುವಕರು ಸೇರಿದಂತೆ ಎಲ್ಲ ವರ್ಗದ ಮತದಾರರ ಆರ್ಶೀವಾದ ಪಡೆದು ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಆದರೆ ತಮಿಳುನಾಡಿನ ಒಟ್ಟು 234 ಸೀಟುಗಳ ಪೈಕಿ ಟಿವಿಕೆಗೆ 107 ಸೀಟುಗಳನ್ನು ಪಡೆದಿದೆ. ರಾಜ್ಯದಲ್ಲಿ ಆದರೆ ಸರ್ಕಾರ ರಚನೆಗೆ 118 ಸೀಟುಗಳ ಅಗತ್ಯವಿದೆ. ಹೀಗಾಗಿ ಬೆಂಬಲ ಕೋರಿದ ವಿಜಯ್ ಅವರಿಗೆ ಕಾಂಗ್ರೆಸ್ ಸಹಕಾರ ನೀಡುವುದಾಗಿ ತಿಳಿಸಿದೆ. ಈ ಸಂಬಂಧ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖಂಡರು ಚರ್ಚಿಸಿ ನಿರ್ಧರಿಸಿದ್ದಾರೆ.
ಕಾಂಗ್ರೆಸ್ ನೀಡಿದ ಷರತ್ತುಗಳೇನು?
ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ಟಿವಿಕೆಗೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡಲಿದೆ. ಆದರೆ ಸಂವಿಧಾನ ತತ್ವಾದರ್ಶಗಳ ಮೇಲೆ ನಂಬಿಕೆ ಇಡದ ಕೋಮು ಶಕ್ತಿಗಳನ್ನು ಹೊರಗಿಡಬೇಕೆಂದು ಷರತ್ತು ವಿಧಿಸಿದೆ. ಥಂಥೈ ಪೆರಿಯಾರ್ ಅವರ ಸಾಮಾಜಿಕ ನ್ಯಾಯ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದ ಆದರ್ಶಗಳ ಮೇಲೆ ಕಾಂಗ್ರೆಸ್ ದಶಕಗಳಿಂದ ನಂಬಿಕೆ ಇಟ್ಟುಕೊಂಡು ಬಂದಿದೆ. ಹೀಗಾಗಿ ಇವುಗಳನ್ನು ವಿರೋಧಿಸುವ ಶಕ್ತಿಯನ್ನು ಟಿವಿಕೆ ಹೊರಗಿಡಬೇಕು ಎಂದು ಕಾಂಗ್ರೆಸ್ ತಿಳಿಸಿದೆ.
ಕಾಂಗ್ರೆಸ್ ಮತ್ತು ಟಿವಿಕೆ ಜೊತೆಗೆ ಇದು ಕೇವಲ ಸರ್ಕಾರ ರಚನೆಗಾಗಿ ಮೈತ್ರಿ ಒಂದೇ ಅಲ್ಲ. ಪರಸ್ಪರ ಸಿದ್ಧಾಂತ, ತತ್ವಾದರ್ಶಗಳ ಗೌರವಿಸುವ ಸಹಕಾರವಾಗಿದೆ. ಮುಖ್ಯವಾಗಿ ತಮಿಳುನಾಡು ಸರ್ಕಾರ ರಚನೆಗೆ ಒಟ್ಟಾಗುವ ಜೊತೆಗೆ ಲೋಕಸಭಾ, ವಿಧಾನಸಭಾ ಸೇರಿ ಭವಿಷ್ಯದ ಚುನಾವಣೆಗಳಿಗೂ ಇದೇ ಸಹಕಾರ ಮುಂದುವರಿಯಬೇಕು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಟಿವಿಕೆ ವಿಜಯ್ ಅವರ ನೇತೃತ್ವದಲ್ಲಿ ಜಂಟಿಯಾಗಿ ತಮಿಳುನಾಡಿನಲ್ಲಿ ಜಾತ್ಯಾತೀತ, ಕಲ್ಯಾಣಪರ ಸರ್ಕಾರ ರಚಿಸಲು ರಾಜ್ಯದ ಯುವಕರು, ನಾಗರಿಕರು ಆಶೀರ್ವಾದ ಮಾಡಿದ್ದಾರೆ ಎಂದು ಕಾಂಗ್ರೆಸ್ ತಿಳಿಸಿದೆ.
