‘ಬಿಜೆಪಿ ಸರಕಾರವು ದೇಶ ಮತ್ತು ಸಮಾಜವನ್ನು ವಿಭಜಿಸಲು ಯತ್ನಿಸುತ್ತಿದೆ’
‘2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಕಿತ್ತೊಗೆಯಬೇಕು’
ವರದಿಗಾರ (ಜ.19): ಮೋದಿ ನೇತೃತ್ವದ ಬಿಜೆಪಿ ಸರಕಾರದಷ್ಟು ಸುಳ್ಳು ಹೇಳಿದ ಇನ್ನೊಂದು ಸರಕಾರವಿಲ್ಲ. ಯಾವುದೇ ಸರಕಾರವು ನೋಟು ನಿಷೇಧದಂತಹ ಅವಿವೇಕದ ನಿರ್ಧಾರ ಕೈಗೊಂಡಿಲ್ಲ, ಜಿಎಸ್ ಟಿಯನ್ನು ಕಳಪೆಯಾಗಿ ಜಾರಿಗೊಳಿಸಿಲ್ಲ ಎಂದು ಮಾಜಿ ಕೇಂದ್ರ ಸಚಿವ ಅರುಣ್ ಶೌರಿ ಇಂದು ಬಿಜೆಪಿಯ ಜನವಿರೋಧಿ ನೀತಿಯ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ.
ಅವರು ಕಲ್ಕತ್ತದಲ್ಲಿ ಮಮತಾ ಬ್ಯಾನರ್ಜಿ ಹಮ್ಮಿಕೊಂಡ ವಿಪಕ್ಷಗಳ ಒಕ್ಕೂಟ ಭಾರತ ಸಮಾವೇಶದಲ್ಲಿ ಮೆಗಾ ರ್ಯಾಲಿಯನ್ನುದ್ದೇಶಿ ಅರುಣ್ ಶೌರಿ ಮಾತನಾಡುತ್ತಾ, “ದೇಶದ ಆರ್ಥಿಕತೆಯು ಅನಿಶ್ಚಿತತೆಯಲ್ಲಿದೆ. ಸರಕಾವು ಅಂಕಿ ಅಂಶಗಳನ್ನು ಉತ್ಪ್ರೇಕ್ಷಿಸುತ್ತದೆ. ಆದರೆ ಸತ್ಯವೇನು ಎಂಬುದು ನಿಮಗೆಲ್ಲರಿಗೂ ಗೊತ್ತಿದೆ. ಸರಕಾರವು ದೇಶ ಮತ್ತು ಸಮಾಜವನ್ನು ವಿಭಜಿಸಲು ಯತ್ನಿಸುತ್ತಿದೆ” ಎಂದು ಅವರು ಹೇಳಿದ್ದಾರೆ.
ನಮಗೆ (ಪ್ರತಿಪಕ್ಷಗಳು ಮತ್ತು ಮುಖಂಡರು) ಕೇವಲ ಒಂದೇ ಒಂದು ಗುರಿ.. ಅದೇನೆಂದರೆ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಕಿತ್ತೊಗೆಯಬೇಕು. ದೇಶಕ್ಕಾಗಿ ನಾವು ತ್ಯಾಗ ಮಾಡಲೇಬೇಕಾಗಿದ್ದು, ಅದನ್ನು ನಾವು ಪ್ರೀತಿಯಿಂದಲೇ ಮಾಡಬೇಕಾಗಿದೆ ಎಂದು ಅವರು ಹೇಳಿದ್ದಾರೆ. ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಪ್ರತಿಪಕ್ಷಗಳು ಒಂದಾಗಿದ್ದರೆ ಬಿಜೆಪಿಯನ್ನು ಸೋಲಿಸಬಹುದಿತ್ತು. ಇದಕ್ಕೆ ಇತ್ತೀಚಿನ ರಾಜಸ್ಥಾನ, ಮಧ್ಯ ಪ್ರದೇಶ ಮತ್ತು ಛತ್ತೀಸ್ ಗಢ ಚುನಾವಣೆಯೇ ಸಾಕ್ಷಿ. ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯುವುದು ಅಸಾಧ್ಯವೇನಲ್ಲ ಎಂದರು.
ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಜನರ ಮೇಲಿನ ಹಿಡಿತ ಕಳೆದುಕೊಳ್ಳುತ್ತಿದ್ದು, ಅವರು ಅಧಿಕಾರಕ್ಕಾಗಿ ಏನೂ ಬೇಕಾದರು ಮಾಡಲು ಸಿದ್ಧರಿದ್ದಾರೆ ಎಂದು ಆರೋಪಿಸಿದರು.
ಕರ್ನಾಟಕದ ರಾಜಕೀಯದ ಪರಿಸ್ಥಿತಿಯನ್ನು ಉಲ್ಲೇಖಿಸಿದ ಶೌರಿ, ಅಮಿತ್ ಶಾ ನೇತೃತ್ವದ ಬಿಜೆಪಿ ಶಾಸಕರ ಕುದುರೆ ವ್ಯಾಪಾರದಲ್ಲಿ ತೊಡಗಿದೆ. ಈಗ ಕರ್ನಾಟಕದಲ್ಲಿ ಮುಂದೆ ಮಧ್ಯ ಪ್ರದೇಶ ಹಾಗೂ ಇತರೆ ರಾಜ್ಯಗಳಲ್ಲೂ ಅದನ್ನು ಮುಂದುವರೆಸಬಹುದು. ಹೀಗಾಗಿ ನಾವು ಎಲ್ಲರೂ ಒಂದಾಗಬೇಕು ಮತ್ತು ಎಚ್ಚರದಿಂದ ಇರಬೇಕು ಎಂದು ಅವರು ಹೇಳಿದ್ದಾರೆ.
