ಪ್ರಧಾನಿ ನರೇಂದ್ರ ಮೋದಿ ಯಾವ ರೀತಿಯ ಹಿಂದು? ಪ್ರಶ್ನಿಸಿದ ರಾಹುಲ್
ಹಿಂದುತ್ವ ಎಂಬುದು ಬಿಜೆಪಿಗೆ ಕೇವಲ ರಾಜಕೀಯ ಅಸ್ತ್ರ
ವರದಿಗಾರ (ಡಿ.01): ಹಿಂದು ಧರ್ಮದ ಮೂಲತತ್ವವೇ ಗೊತ್ತಿಲ್ಲದ ಪ್ರಧಾನಿ ಮೋದಿ ತಾನೊಬ್ಬ ಹಿಂದು ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ರಾಜಸ್ಥಾನದ ಉದಯಪುರದಲ್ಲಿ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದ ವೇಳೆ ಮೋದಿ ವಿರುದ್ಧ ಹರಿಹಾಯ್ದ ಅವರು, ‘ಹಿಂದುತ್ವದ ಮೂಲತತ್ವವೇನು? ಭಗವದ್ಗೀತೆಯು ಏನು ಹೇಳುತ್ತದೆ? ಜ್ಞಾನವು ಎಲ್ಲರ ಬಳಿಯೂ ಇದೆ, ಎಲ್ಲರ ಸುತ್ತಲೂ ಇದೆ ಎಂದು ಗೀತೆ ಹೇಳುತ್ತದೆ. ಪ್ರತಿಯೊಂದು ಜೀವಿಯೂ ಜ್ಞಾನವನ್ನು ಹೊಂದಿದೆ. ತಾನೊಬ್ಬ ಹಿಂದು ಎಂದು ನಮ್ಮ ಪ್ರಧಾನಿ ಹೇಳಿಕೊಳ್ಳುತ್ತಾರೆ. ಆದರೆ ಹಿಂದು ಧರ್ಮದ ಮೂಲತತ್ವವೇ ಅವರಿಗೆ ಗೊತ್ತಿಲ್ಲ. ಅವರು ಯಾವ ರೀತಿಯ ಹಿಂದು? ಎಂದು ಪ್ರಶ್ನಿಸುತ್ತಾ, ವ್ಯಂಗ್ಯವಾಡಿದ್ದಾರೆ. ಹಿಂದುತ್ವ ಎಂಬುದು ಬಿಜೆಪಿಗೆ ಕೇವಲ ರಾಜಕೀಯ ಅಸ್ತ್ರ ಎಂದೂ ರಾಹುಲ್ ಗಾಂಧಿ ಹೇಳಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆಯು 2016ರಲ್ಲಿ ನಡೆಸಿದ್ದ ನಿರ್ದಿಷ್ಟ ದಾಳಿಯನ್ನು ಮೋದಿ ಸರ್ಕಾರ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದೂ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಡಾ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗಲೂ ಭಾರತೀಯ ಸೇನೆ ಮೂರು ಬಾರಿ ನಿರ್ದಿಷ್ಟ ದಾಳಿ ನಡೆಸಿತ್ತು. ಆದರೆ, ಸೇನೆಯ ಮನವಿ ಮೇರೆಗೆ ಅದನ್ನು ಗೌಪ್ಯವಾಗಿಡಲಾಗಿತ್ತು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
