ವರದಿಗಾರ (ಡಿ. 03) : ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಸಂಕಷ್ಟಗಳ ಮೇಲೆ ಸಂಕಷ್ಟಗಳು ಎದುರಾಗುವ ಲಕ್ಷಣಗಳು ಗೋಚರಿಸುತ್ತಿದೆ. ಆಡಳಿತದಲ್ಲಿ ಸಂಪೂರ್ಣವಾಗಿ ವಿಫಲರಾಗಿರುವ ಕೇಂದ್ರ ಸರಕಾರದ ವಿರುದ್ಧ, ವಿವಿಧ ರಂಗಗಳಲ್ಲಿ ಮುಂಚೂಣಿಯಲ್ಲಿರುವ ಗಣ್ಯರು ಮೋದಿಯ ವಿರುದ್ಧ ಧ್ವನಿ ಎತ್ತುತ್ತಿರುವಂತೆಯೇ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅನ್ನದಾತರ ಬೃಹತ್ ಪ್ರತಿಭಟನೆ ಮೋದಿಯ ನಿದ್ದೆಗೆಡಿಸಿವೆ. ಈ ಎಲ್ಲಾ ವಿದ್ಯಮಾನಗಳ ನಡುವೆ 2002 ರ ಗುಜರಾತ್ ಗಲಭೆಯಲ್ಲಿ ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯದ್ದು ಏನೂ ಪಾತ್ರವಿಲ್ಲವೆಂದು ‘ಕ್ಲೀನ್ ಚಿಟ್’ ನೀಡಿದ್ದ ವಿಶೇಷ ತನಿಖಾ ದಳ (ಸಿಟ್) ದ ನಿರ್ಧಾರವನ್ನು ಪ್ರಶ್ನಿಸಿ ಝಾಕಿಯಾ ಜಾಫ್ರಿ ಸಲ್ಲಿಸಿರುವ ಅರ್ಜಿಯನ್ನು ಕೈಗೆತ್ತಿಕೊಳ್ಳುವುದಾಗಿ ಸುಪ್ರೀಮ್ ಕೋರ್ಟ್ ತಿಳಿಸಿದೆ. ಸುಪ್ರೀಮ್ ಕೋರ್ಟ್ ಜನವರಿ ಮೂರನೇ ವಾರದಲ್ಲಿ ಈ ಅರ್ಜಿಯ ವಿಚಾರಣೆ ನಡೆಸಲಿದೆ.
ಗೋಧ್ರಾ ಗಲಭೆಯ ವೇಳೆ ಮೃತಪಟ್ಟ ತನ್ನ ಪತಿ, ಕಾಂಗ್ರೆಸ್ ಮಾಜಿ ಸಂಸದರಾಗಿದ್ದ ಇಹ್ಸಾನ್ ಜಾಫ್ರಿಯವರ ಪತ್ನಿಯಾಗಿರುವ ಝಾಕಿಯಾ ಜಾಫ್ರಿಯವರು ಸಿಟ್ ನಿರ್ಧಾರವನ್ನು ಪ್ರಶ್ನಿಸಿ ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ 2017 ಅಕ್ಟೋಬರ್ 5 ರಂದು ಹೈಕೋರ್ಟ್ ಈ ಅರ್ಜಿಯನ್ನು ತಳ್ಳಿ ಹಾಕಿತ್ತು. ಆದರೆ ಛಲ ಬಿಡದ ಝಾಕಿಯಾ ಗುಜರಾತ್ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಮ್ ಕದ ತಟ್ಟಿದ್ದರು. ಇದೀಗ ನ್ಯಾಯಮೂರ್ತಿ ಎ ಎಂ ಖಾನ್ವಿಲ್ಕರ್ ಮತ್ತು ನ್ಯಾಯಮೂರ್ತಿ ಹೇಮಂತ್ ಗುಪ್ತಾ ಅವರಿದ್ದ ವಿಭಾಗೀಯ ಪೀಠ ಅರ್ಜಿಯ ವಿಚಾರಣೆಯನ್ನು ಜನವರಿ ಮೂರನೇ ವಾರಕ್ಕೆ ಮುಂದೂಡಿತು.
ಕಳೆದ 16 ವರ್ಷಗಳಿಂದ ಗುಜರಾತ್ ಗಲಭೆಯ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ವಿವಿಧ ನ್ಯಾಯಾಲಯಗಳ ಮೆಟ್ಟಿಲೇರಿರುವ ಝಾಕಿಯಾ ಜಾಫ್ರಿಯವರು ತನ್ನ ಪತಿಯ ಹಂತಕರನ್ನು ಕಾನೂನಿನ ಕುಣಿಕೆಗೊಡ್ಡುವ ತನ್ನ ದಿಟ್ಟ ನಿಲುವಿನಿಂದ ವಿಚಲಿತರಾಗಿಲ್ಲ.
