ಸಮ್ಮಿಶ್ರ ಸರಕಾರವನ್ನು ಬೀಳಿಸುತ್ತೇವೆ ಎಂದು ಬಿಜೆಪಿಗರು ಕನಸು ಕಾಣುತ್ತಿದ್ದಾರೆ: ಗೂಂಡೂರಾವ್

ಕುದುರೆ ವ್ಯಾಪಾರ ಮಾಡಿ ಅನೈತಿಕ ಮಾರ್ಗದಲ್ಲಿ ಅಧಿಕಾರ ಹಿಡಿಯಲು ಆತುರ ತೋರಿಸುತ್ತಿದ್ದಾರೆ
ವರದಿಗಾರ (ಸೆ.11): ಕರ್ನಾಟಕ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಬೀಳಿಸುತ್ತೇವೆ ಎಂದು ಬಿಜೆಪಿಗರು ಕನಸು ಕಾಣುತ್ತಿದ್ದು, ಅವರು ಕನಸು ಈಡೇರುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗೂಂಡೂರಾವ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಾ, ರಾಜ್ಯ ಸರ್ಕಾರವನ್ನು ಪತನಗೊಳಿಸಲು ಬಿಜೆಪಿಯವರು ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಪ್ರಯತ್ನಿಸುತ್ತಲೇ ಇದ್ದಾರೆ. ಕುದುರೆ ವ್ಯಾಪಾರ ಮಾಡಿ ಅನೈತಿಕ ಮಾರ್ಗದಲ್ಲಿ ಅಧಿಕಾರ ಹಿಡಿಯಲು ಆತುರ ತೋರಿಸುತ್ತಿದ್ದಾರೆ. ಆದರೆ, ನಾವು ಬಿಜೆಪಿಯವರ ಮಟ್ಟಕ್ಕಿಳಿಯುವುದಿಲ್ಲ ಎಂದು ಹೇಳಿದ್ದಾರೆ.
ನಮ್ಮ ಶಾಸಕರಿಗೆ ಏನೆಲ್ಲಾ ಆಮಿಷಗಳನ್ನು ಒಡ್ಡಿದ್ದಾರೆ ಎಂಬುದು ನನಗೆ ಗೊತ್ತಿದೆ. ಅವರ ಆಮಿಷಗಳನ್ನು ನಮ್ಮ ಶಾಸಕರು ತಿರಸ್ಕರಿಸಿದ್ದಾರೆ. ಯಾರೂ ಕಾಂಗ್ರೆಸ್ ತೊರೆಯುವುದಿಲ್ಲ. ಸತೀಶ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ ಹಾಗೂ ನಾನು ಎಲ್ಲರೂ ಒಟ್ಟಾಗಿದ್ದೇವೆ. ಯಾವುದೇ ಅಸಮಾಧಾನಗಳಾಗಲಿ, ಭಿನ್ನಮತಗಳಾಗಲಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
