ಒಂದು ವೇಳೆ ಇಂದು ಸ್ವಾಮಿ ವಿವೇಕಾನಂದರಿರುತ್ತಿದ್ದರೆ ಅವರ ಮೇಲೂ ದಾಳಿ ನಡೆಯುತ್ತಿತ್ತು: ಶಶಿ ತರೂರ್

ವರದಿಗಾರ (ಆ.06): ಪಶ್ಚಿಮದಲ್ಲಿ ಭಾರತೀಯ ತತ್ವಜ್ಞಾನ ಪರಿಚಯಿಸಿದ್ದ 19ನೇ ಶತಮಾನದ ಆಧ್ಯಾತ್ಮಿಕ ನಾಯಕ ಸ್ವಾಮಿ ವಿವೇಕಾನಂದರು ಇಂದು ಇದ್ದಿದ್ದರೆ ಮಾನವೀಯತೆಯ ಪ್ರತಿಪಾದನೆಗಾಗಿ ತೀವ್ರ ಹಿಂಸಾತ್ಮಕ ದಾಳಿಯನ್ನು ಎದುರಿಸಬೇಕಾಗುತ್ತಿತ್ತು ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದಾರೆ.
ಸಾಮಾಜಿಕ ಹೋರಾಟಗಾರ ಸ್ವಾಮಿ ಅಗ್ನಿವೇಶ್ ಪಾಲ್ಗೊಂಡ, ತಿರುವನಂತಪುರದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾರ್ಖಂಡ್ನಲ್ಲಿ ಕಳೆದ ತಿಂಗಳು 79 ವರ್ಷದ ಸ್ವಾಮಿ ಅಗ್ನಿವೇಶ್ ಮೇಲೆ ನಡೆದ ದಾಳಿಯನ್ನು ಉಲ್ಲೇಖಿಸಿದರು. ಸ್ವಾಮಿ ವಿವೇಕಾನಂದ ಅವರು ಮಾನವೀಯತೆಯನ್ನು ಉಸಿರಾಗಿಸಿಕೊಂಡವರು. ಜನರನ್ನು ಗೌರವಿಸುವಂತೆ ಜಗತ್ತಿಗೆ ಸಾರಿದವರು. ಅಕಸ್ಮಾತ್ ಅವರು ಈಗ ಬದುಕಿದ್ದಿದ್ದರೆ ಅಗ್ನಿವೇಶ್ ಮೇಲೆ ದಾಳಿ ನಡೆದಂತೆ ಅವರ ಮೇಲೂ ಹಲ್ಲೆಗಳು ನಡೆಯುತ್ತಿತ್ತು ಹಾಗೂ ಮುಖಕ್ಕೆ ಮಸಿ ಎರಚಲಾಗುತ್ತಿತ್ತು ಎಂದು ಹೇಳಿದ್ದಾರೆ.
ಒಂದು ವೇಳೆ ಸ್ವಾಮಿ ವಿವೇಕಾನಂದರು ಇಂದು ಭಾರತಕ್ಕೆ ಬಂದರೆ, ಅವರು ಕೂಡ ಈ ಗೂಂಡಾಗಳ ದಾಳಿಗೆ ಗುರಿಯಾಗುತ್ತಿದ್ದರು. ಗೂಂಡಾಗಳು ಎಂಜಿನ್ ಆಯಿಲ್ ತಂದು ಅವರ ಮುಖಕ್ಕೆ ಎರಚುತ್ತಿದ್ಗದರು. ಅವರನ್ನು ಬೀದಿಯಲ್ಲಿ ಕೆಡವಿ ಥಳಿಸಲು ಯತ್ನಿಸುತ್ತಿದ್ದರು. ಯಾಕೆಂದರೆ ಜನರಿಗೆ ಗೌರವ ನೀಡಿ ಎಂದು ಸ್ವಾಮಿ ವಿವೇಕಾನಂದ ಹೇಳಿದ್ದಾರೆ. ಮಾನವೀಯತೆ ತುಂಬಾ ಮುಖ್ಯ ಎಂದು ಅವರು ಹೇಳಿದ್ದಾರೆ ಎಂದು ತರೂರ್ ತಿಳಿಸಿದರು.
