ಪ್ರಧಾನಿ ಹಾಗೂ ಬಿಜೆಪಿ ರಾಷ್ಟ್ರದ ಸಂವಿಧಾನ ಹಾಗೂ ಇತರ ಸಂಸ್ಥೆಗಳ ವಿರುದ್ಧ ದಾಳಿ ಮಾಡುತ್ತಿದೆ: ರಾಹುಲ್ ಗಾಂಧಿ

ಬಿಜೆಪಿ, ಆರೆಸ್ಸೆಸ್, ಮೋದಿ ವಿರುದ್ಧದ ಮಹಾಮೈತ್ರಿ ಜನರ ಸಂವೇದನೆ
ವರದಿಗಾರ (ಜೂ.14): ಮೋದಿ ಹಾಗೂ ಕೇಂದ್ರದ ಆಡಳಿತಾರೂಢ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ಹಾಗೂ ಬಿಜೆಪಿ ರಾಷ್ಟ್ರದ ಸಂವಿಧಾನ ಹಾಗೂ ಇತರ ಸಂಸ್ಥೆಗಳ ವಿರುದ್ಧ ದಾಳಿ ಮಾಡುತ್ತಿದೆ ಎಂದು ಗಂಭೀರವಾದ ಆರೋಪವನ್ನು ಮಾಡಿದ್ದಾರೆ.
‘ಬಿಜೆಪಿ, ಆರೆಸ್ಸೆಸ್ ಹಾಗೂ ಪ್ರಧಾನಿ ನರೇಂದ್ರ ಮೋದಿಯ ವಿರುದ್ಧದ ಮಹಾ ಮೈತ್ರಿ ಜನರ ಸಂವೇದನೆ. ಕೇವಲ ಪಕ್ಷಗಳ ಹಿತಾಸಕ್ತಿ ಅಲ್ಲ’. ಎಂದು ಅವರು ಹೇಳಿದ್ದಾರೆ.
ಆದಾಗ್ಯೂ, ಪ್ರತಿಪಕ್ಷಗಳ ಮಹಾಮೈತ್ರಿ ನೇತೃತ್ವವನ್ನು ಯಾರು ವಹಿಸಿಕೊಳ್ಳಲಿದ್ದಾರೆ ಎಂಬ ಪ್ರಶ್ನೆಗೆ ರಾಹುಲ್ ಗಾಂಧಿ ಉತ್ತರಿಸಿಲ್ಲ. ಎರಡು ದಿನಗಳ ಪ್ರವಾಸದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಮಂಗಳವಾರ ಮಹಾರಾಷ್ಟ್ರಕ್ಕೆ ಆಗಮಿಸಿದ್ದಾರೆ. ಸಾಮಾನ್ಯ ಜನರಿಗೆ ಪರಿಹಾರ ಒದಗಿಸಲು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಜಿಎಸ್ಟಿ ಅಡಿಯಲ್ಲಿ ತರಲು ಪ್ರತಿಪಕ್ಷ ಮೋದಿ ಅವರನ್ನು ಕೇಳುತ್ತಿದೆ. ಆದರೆ, ಅವರು ಆಸಕ್ತಿ ವಹಿಸುತ್ತಿಲ್ಲ ಎಂದು ಅವರು ಹೇಳಿದರು.
