ಕಲ್ಯಾಣ್ ಜ್ಯುವೆಲ್ಲರ್ಸ್ ಬಗ್ಗೆ ಸುಳ್ಳು ಸಂದೇಶಗಳನ್ನು ಹರಡಿದ ಆರೋಪ
ವರದಿಗಾರ(02-04-2018): ಸಾಮಾಜಿಕ ಜಾಲತಾಣಗಳನ್ನು ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ಭಾರತೀಯ ಮೂಲದ ಐವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಪ್ರಾರಂಭಿಸಲು ದುಬೈ ಪಬ್ಲಿಕ್ ಪ್ರಾಸಿಕ್ಯೂಷನ್ ಅಲ್ಲಿನ ಪೊಲೀಸರನ್ನು ಕೇಳಿಕೊಂಡಿದೆ.
ತನಿಖೆಯ ಮೂಲಕ ಓರ್ವನು ಕಲ್ಯಾಣ್ ಜ್ಯುವೆಲ್ಲರ್ಸ್ ವಿರುದ್ಧ ಸುಳ್ಳು ಸಂದೇಶಗಳನ್ನು ಹರಡಿರುವುದು ಖಚಿತಗೊಂಡಿದೆ. ಆತನು ಕಲ್ಯಾಣ್ ಜ್ಯುವೆಲ್ಲರ್ಸ್ ಮಾರಾಟ ಮಾಡುವ ಆಭರಣಗಳು ನಕಲಿ ಹಾಗೂ ಅಶುದ್ಧ ಎಂದು ಬಿಂಬಿಸುವ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದನು. ಇತರ ಆರೋಪಿಗಳ ತನಿಖೆ ನಡೆಯುತ್ತಿದೆ.
ಪ್ರಸಿದ್ಧ ಆಭರಣ ಮಳಿಗೆಯ ಬಗ್ಗೆ ಸುಳ್ಳು ಸಂದೇಶಗಳನ್ನು ಹಾಗೂ ನಕಲಿ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ, ಮುಖ್ಯವಾಗಿ ವಾಟ್ಸಪ್ ಗ್ರೂಪ್ ಗಳಲ್ಲಿ ಹರಡಲಾಗಿತ್ತು. ಕಲ್ಯಾಣ್ ಜ್ಯುವೆಲ್ಲರ್ಸ್’ನ ಯುಎಇ ಮಳಿಗೆಗಳನ್ನು ಸೀಲ್ ಮಾಡಿ ಮಾಲೀಕನನ್ನು ಬಂಧಿಸಲಾಗಿದೆಯೆಂದೂ ಸಂದೇಶಗಳಲ್ಲಿ ಹೇಳಲಾಗಿತ್ತು.
ಈ ಬಗ್ಗೆ ಕಲ್ಯಾಣ್ ಜ್ಯುವೆಲ್ಲರ್ಸ್, ದುಬೈ ಪೊಲೀಸರಿಗೆ ದೂರು ನೀಡಿತ್ತು. ದುಬೈ ಪೊಲೀಸರು ಸೈಬರ್ ಕ್ರೈಂ ವಿಭಾಗದ ಸಹಾಯದೊಂದಿಗೆ ತನಿಖೆ ನಡೆಸುತ್ತಿದೆ. ಇನ್ನೂ ಈ ರೀತಿಯ ಸಂದೇಶಗಳನ್ನು ಹರಡುತ್ತಿರುವವರ ಮೇಲೆ ಕಣ್ಣಿಡಲಾಗಿದೆ.
