ವರದಿಗಾರ : ಕಳೆದ ಮೂರು ವಾರಗಳ ಹಿಂದೆ ಕಾಟಿಪಳ್ಳದಲ್ಲಿ ಸಾರ್ವಜನಿಕರ ಮುಂದೆ ಸಮಾಜಘಾತುಕ ಕೃತ್ಯ ನಡೆಸುವ ತಂಡವೊಂದರಿಂದ ಅಪಹರಣಕ್ಕೊಳಗಾಗಿರುವ ಸಫ್ವಾನ್ ಎಂಬ ಯುವಕನ ಕುರಿತಾಗಿ ಮತ್ತು ಸಫ್ವಾನ್ ನನ್ನು ಅಪಹರಣ ಮಾಡಿದ್ದಾರೆನ್ನುವ ತಂಡದ ಕುರಿತಾಗಿ ಯಾವುದೇ ಮಾಹಿತಿ ಕಲೆ ಹಾಕುವಲ್ಲಿ ಪೋಲೀಸ್ ಇಲಾಖೆ ವಿಫಲವಾಗಿರುವುದು ಖಂಡನೀಯ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದ.ಕ.ಜಿಲ್ಲಾಧ್ಯಕ್ಷರಾದ ನವಾಜ್ ಉಳ್ಳಾಲ್ ತಿಳಿಸಿದ್ದಾರೆ.
ಪ್ರಸಕ್ತ ಕಾಲದಲ್ಲಿ ಪೋಲೀಸ್ ಇಲಾಖೆಯು ಆಧುನಿಕ ತಂತ್ರಜ್ಞಾನದ ಸಹಾಯದಿಂದ ಹಲವಾರು ಪ್ರಕರಣಗಳನ್ನು ಭೇದಿಸುತ್ತಿದ್ದು,ಈ ಪ್ರಕರಣದಲ್ಲಿ ಭಾಗಿಯಾಗಿರುವ ದುಷ್ಕರ್ಮಿಗಳ ಕುರಿತು ಮಾಹಿತಿ ಕಲೆ ಹಾಕಲು ವಿಫಲವಾಗಿರುವುದು ಸಾರ್ವಜನಿಕ ವಲಯದಲ್ಲಿ ಆಶ್ಚರ್ಯ ಮೂಡಿಸಿದೆ.
ಆದ್ದರಿಂದ ಪೋಲೀಸ್ ಆಯುಕ್ತರು ಈ ಪ್ರಕರಣದ ಕುರಿತು ವಿಶೇಷ ಮುತುವರ್ಜಿ ವಹಿಸಿ ಪ್ರತ್ಯೇಕ ತನಿಖಾ ತಂಡವನ್ನು ರಚಿಸಿ, ಅತೀ ಶೀಘ್ರದಲ್ಲಿ ಅಪಹರಣಕಾರರನ್ನು ಬಂಧಿಸುವ ಮೂಲಕ ಸಾರ್ವಜನಿಕ ವಲಯದಲ್ಲಿ ಎದ್ದಿರುವ ಆತಂಕವನ್ನು ಕೊನೆಗೊಳಿಸಿ ಪ್ರಕರಣಕ್ಕೆ ತೆರೆ ಎಳೆಯಬೇಕೆಂದು ಇದೇ ಸಂಧರ್ಭದಲ್ಲಿ ನವಾಜ್ ಉಳ್ಳಾಲ್ ಆಗ್ರಹಿಸಿದ್ದಾರೆ.
