ಮಯನ್ಮಾರಿನ ಅಲ್ಪಸಂಖ್ಯಾತರಾದ ರೋಹಿಂಗ್ಯಾ ಮುಸ್ಲಿಮರ ಮೇಲೆ ನಡೆಯುತ್ತಿರುವ ದೌರ್ಜನ್ಯ ಮುಂದುವರಿಯುತ್ತಲೇ ಇದೆ. ವರ್ಷಗಳಿಂದ ದೌರ್ಜನ್ಯ ನಡೆಯುತ್ತಿದ್ದರೂ, ಇದೀಗ ಅಂತಾರಾಷ್ಟ್ರೀಯ ಮಾಧ್ಯಮಗಳ ಕಣ್ಣುಗಳು ತೆರೆದಿವೆ. ಇದಕ್ಕಿಂತ ಮೊದಲು ಬೆರಳೆಣಿಕೆಯಷ್ಟೇ ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿದ್ದವು.
ನಿರಾಶ್ರಿತರ ಸಹಾಯಕ್ಕಾಗಿರುವ ವಿಶ್ವ ಸಂಸ್ಥೆಯ ರೆಫ್ಯೂಜೀ ಏಜೆನ್ಸಿ ಯ ವೀಡಿಯೋ ರೋಹಿಂಗ್ಯಾ ಮುಸ್ಲಿಮರು ಅನುಭವಿಸುತ್ತಿರುವ ಕಷ್ಟಗಳನ್ನು ವಿವರಿಸುತ್ತಿದೆ.
ಈವರೆಗೆ ಹಿಂಸಾಚಾರದಿಂದ ಪಾರಾಗಲು ಗದ್ದೆ, ಬೆಟ್ಟಗಳನ್ನು ದಾಟಿ 1,23,000 ರೋಹಿಂಗ್ಯಾ ಮುಸ್ಲಿಮರು ಬಾಂಗ್ಲಾದೇಶವನ್ನು ತಲುಪಿದ್ದಾರೆ. ನದಿಗಳನ್ನು ದಾಟಿ, ಕಾಡುಗಳಲ್ಲಡಗುತ್ತಾ ಪಲಾಯನ ನಡೆಸುವ ಇವರಲ್ಲಿ ಹಲವರಿಗೆ ಆಹಾರ ದೊರಕಿ ದಿನಗಳಾಗಿವೆ. ಬಾಂಗ್ಲಾದೇಶದಲ್ಲಿ ಅವರನ್ನು ನಿರಾಶ್ರಿತರ ಶಿಬಿರಕ್ಕೆ ಕಳುಹಿಸಲಾಗುತ್ತದೆ. ಅಲ್ಲಿನ ಸ್ವಯಂ ಸೇವಕರು ನಿರಾಶ್ರಿತರಿಗಾಗಿ ಆಹಾರದ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದಾರೆ.
ಒಟ್ಟಿನಲ್ಲಿ ಜಾಗತಿಕ ವ್ಯವಸ್ಥೆಯ ಕ್ರೂರ ಪಕ್ಷಪಾತಕ್ಕೊಳಪಟ್ಟು ನೇಪಥ್ಯಕ್ಕೆ ಸರಿಸಲ್ಪಟ್ಟಿದ್ದ ಜನಾಂಗವೊಂದರ ಅರಣ್ಯರೋಧನ ಈಗೀಗ ಕೆಲವರ ಕಿವಿಗಪ್ಪಳಿಸುತ್ತಿದೆ. ಈ ವರ್ಷಾಂತ್ಯದ ವೇಳೆಗೆ ಪೋಪ್ ಕೂಡಾ ಮಯನ್ಮಾರಿಗೆ ಭೇಟಿ ನೀಡುವ ಯೋಜನೆಯನ್ನು ಹಾಕಿಕೊಂಡಿದ್ದಾರೆ. ಇದೇ ವೇಳೆ ಟರ್ಕಿ ಕೂಡಾ ಮಾನವೀಯತೆಯ ಕೂಗಿಗೆ ನೆರವಾಗುವ ರಾಷ್ಟ್ರಗಳಲ್ಲಿ ಯಾವತ್ತೂ ಮೊದಲ ಪಂಕ್ತಿಯಲ್ಲಿದ್ದುಕೊಂಡು , ರೋಹಿಂಗ್ಯಾದವರ ಸಮಾಸ್ಯೆಗೆ ನಿರ್ಣಾಯಕ ಪರಿಹಾರವೊಂದಕ್ಕಾಗಿ ಇತರೆ ಮುಸ್ಲಿಂ ರಾಷ್ಟ್ರಗಳ ಸಹಕಾರವನ್ನೂ ಎದುರು ನೋಡುತ್ತಿದ್ದು, ಡಿಸಂಬರ್ ವೇಳೆಗೆ ಅದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳುವ ವಿಶ್ವಾಸದಲ್ಲಿದೆ. ಆದರೆ ಜಾಗತಿಕ ಶಾಂತಿಗಾಗಿ ನೊಬೆಲ್ ಪ್ರಶಸ್ತಿ ಪಡೆದಿದ್ದ ಆಂಗ್ ಸಾನ್ ಸೂಕಿಯ ರಾಷ್ಟ್ರದೊಳಗೆ ನಡೆಯುತ್ತಿರುವ ಮಾನವ ಹಕ್ಕುಗಳ ದೌರ್ಜನ್ಯಗಳ ಕುರಿತು ಆಕೆಯ ಮೌನ, ಆಕೆ ಗಳಿಸಿರುವ ನೊಬೆಲ್ ಪ್ರಶಸ್ತಿಯು ಪರಿಹಾಸ್ಯಕ್ಕೊಳಪಟ್ಟಿದೆ ಎಂಬುವುದು ಸುಳ್ಳಲ್ಲ.
