ವರದಿಗಾರ (ಅ.15): ಪ್ರಸಕ್ತ ವರ್ಷದ ಫೆಬ್ರವರಿಯಲ್ಲಿ ದೆಹಲಿಯಲ್ಲಿ ನಡೆದ ಕೋಮು ಗಲಭೆಯಲ್ಲಿ ಕೊಲ್ಲಲ್ಪಟ್ಟಿರುವವರ ಸಂಖ್ಯೆಯ ಬಗ್ಗೆ ನ್ಯಾಯಾಲಯದಲ್ಲಿ ದಿಲ್ಲಿ ಪೊಲೀಸ್ ಸಲ್ಲಿಸಿರುವ ಲೆಕ್ಕಾಚಾರದಲ್ಲಿ ನಿಖರತೆಯಿಲ್ಲ ಎಂದು ಸಿಪಿಐ(ಎಂ) ಪಾಲಿಟ್ ಬ್ಯುರೊ ಸದಸ್ಯರಾದ ಬೃಂದಾ ಕಾರಟ್ ದೆಹಲಿ ಪೊಲೀಸ್ ಆಯುಕ್ತ ಎಸ್.ಎನ್.ಶ್ರೀವಾಸ್ತವ ಅವರಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.
ದೆಹಲಿ ಪೊಲೀಸರು ವಿವಿಧ ಅಫಿದವಿತ್ ಗಳಲ್ಲಿ ಮತ್ತು ಸಾರ್ವಜನಿಕ ಹೇಳಿಕೆಗಳಲ್ಲಿ ಸತ್ತವರ ಸಂಖ್ಯೆ 53 ಎಂದು ಹೇಳಿಕೊಂಡು ಬಂದಿದ್ದಾರೆ. ಇದರಲ್ಲಿ ಈ ಹಿಂದೆ ಗುರುತಿಸಿರದ, ಆದರೆ ನಂತರ ಗುರುತಿಸಿದವರ ಹೆಸರುಗಳೂ ಇವೆ ಎಂದು ತಿಳಿಸಿದ್ದಾರೆ. ಆದರೆ ಕೊಲ್ಲಲ್ಪಟ್ಟವರಲ್ಲಿ ಒಬ್ಬರಾದ ಸಿಕಂದರ್ ಬಿನ್ ಮುಹಮ್ಮದ್ ಮುಲ್ಲಕ್ ಅವರ ಹೆಸರು ಪಟ್ಟಿಯಲ್ಲಿ ಇಲ್ಲ. ಇವರನ್ನು 27/2 ರಂದು ಅಪರಿಚಿತ ಎಂದು ನಮೂದಿಸಲಾಗಿತ್ತು. ಆದರೆ 19/3 ರಂದು ಸಿಕಂದರ್ ಎಂದು ದಾಖಲು ಮಾಡಲಾಗಿದೆ.
ಅವರು ತಲೆಗೆ ಗಂಭೀರವಾಗಿ ಗಾಯಗೊಂಡು ಸತ್ತರು ಎಂದು ಮರಣೋತ್ತರ ಪರೀಕ್ಷೆ ಹೇಳುತ್ತದೆ. ಸಿಕಂದರ್ ಅವರ ಸಹೋದರ ಮಹಮ್ಮದ್ ಇಷ್ಫಾಕ್, ಎಫ್ ಐ ಆರ್ ಪ್ರತಿ ಪಡೆಯಲು ಖಜುರಿ ಖಾಸ್ ಪೊಲೀಸ್ ಠಾಣೆಗೆ ಹಲವು ಬಾರಿ ಅಲೆದಿದ್ದಾರೆ. ಆದರೂ ಎಫ್ ಐಆರ್ ನೀಡಿಲ್ಲ, ಆದರೆ ಪಟ್ಟಿಯಲ್ಲಿ ಅವರ ಹೆಸರನ್ನು ಸೇರಿಸಿ ‘ಹೇಗಾದರೂ ಪರಿಹಾರ ಕೊಡಿಸೋಣ’ ಪೋಲೀಸ್ ಸಿಬ್ಬಂದಿ ಹೇಳಿರುವುದಾಗಿ ವರದಿಯಾಗಿದೆ.
ಈ ಕುಟುಂಬ ಭೀತಿಯ ವಾತಾವರಣದಲ್ಲಿ ಬದುಕುತ್ತಿದೆ. ಭಜನಪುರದಲ್ಲಿದ್ದ ಇಷ್ಫಾಕ್ ಅವರ ಅಂಗಡಿ ಸುಟ್ಟುಹೋಗಿದ್ದು, ಸಂಪೂರ್ಣ ಲೂಟಿಯಾಗಿದೆ. ಘೊಂಡದಲ್ಲಿ ಆಕೆಯ ಸೋದರಿಯ ಮನೆ ಲೂಟಿಯಾಗಿದೆ. ಇಂತಹ ಕುಟುಂಬದ ಬಗ್ಗೆ ಸಹಾನುಭೂತಿಯಿದ ವರ್ತಿಸುವ ಬದಲು, ದಿಲ್ಲಿ ಪೋಲೀಸ್ ಸಿಕಂದರ್ ನನ್ನು ಹಿಂಸಾಚಾರಕ್ಕೆ ಬಲಿಯಾದವರೆಂದು ಗುರುತಿಸದೆ ಅವರ ಕಷ್ಟಕಾರ್ಪಣ್ಯಗಳನ್ನು ಇನ್ನಷ್ಟು ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ಮಧ್ಯಪ್ರವೇಶಿಸಬೇಕು. ಹೈಕೋರ್ಟಿಗೆ ಸಲ್ಲಿಸಿರುವ ಸತ್ತವರ ಪಟ್ಟಿಯ ಸಂಖ್ಯೆಯನ್ನು ಸರಿಪಡಿಸಬೇಕು, ಸಿಕಂದರ್ ಹೆಸರಿನ ಸೇರ್ಪಡಿಸಿ ಸಾವಿನ ಸಂಖ್ಯೆಯನ್ನು 54 ಎಂದು ದೃಢಪಡಿಸಬೇಕು. ಎಫ್ ಐ ಆರ್ ನ ಒಂದು ಪ್ರತಿಯನ್ನು ಸಿಕಂದರನ ಕುಟುಂಬದವರಿಗೆ ಕೊಡಬೇಕು ಮತ್ತು ಈ ಅನಿಖರತೆಗೆ, ಹಿಂಸಾಚಾರಕ್ಕೆ ಬಲಿಯಾದ ಕುಟುಂಬಕ್ಕೆ ಕಿರುಕುಳ ಕೊಟ್ಟಿರುವ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬೃಂದಾ ಕಾರಟ್ ದಿಲ್ಲಿ ಪೊಲೀಸ್ ಆಯುಕ್ತರನ್ನು ಆಗ್ರಹಿಸಿದ್ದಾರೆ.
