ವರದಿಗಾರ (ಅ.14) 2019, ಆಗಸ್ಟ್ 5 ರಂದು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನಂತರ ಬಂಧನಕ್ಕೊಳಗಾಗಿದ್ದ ಮುಫ್ತಿ ಅವರು 14 ತಿಂಗಳ ನಂತರ ಮಂಗಳವಾರ ಸಂಜೆ ಬಿಡುಗಡೆಗೊಂಡಿದ್ದಾರೆ.
ಮೆಹಬೂಬಾ ಮುಫ್ತಿ ಅವರನ್ನು ಗೃಹ ಬಂಧನದಿಂದ ಬಿಡುಗಡೆ ಮಾಡಲಾಗಿದೆ ಎಂದು ಮಂಗಳವಾರ ಜಮ್ಮು ಮತ್ತು ಕಾಶ್ಮೀರ ಆಡಳಿತದ ಮುಖ್ಯ ಕಾರ್ಯದರ್ಶಿ ರೋಹಿತ್ ಕನ್ಸಾಲ್ ಟ್ವೀಟ್ ಮಾಡಿದ್ದಾರೆ.
ಬಿಡುಗಡೆಯಾದ ಕೆಲವೇ ಗಂಟೆಗಳ ನಂತರ, ಮುಫ್ತಿ ಆಡಿಯೋ ಸಂದೇಶ ಒಂದರಲ್ಲಿ, ಕಾಶ್ಮೀರ ಸಮಸ್ಯೆಯ ಪರಿಹಾರಕ್ಕಾಗಿ ಜನರು ನಿರಂತರವಾಗಿ ಹೋರಾಡಬೇಕಾಗುತ್ತದೆ. 2019ರ ಆಗಸ್ಟ್ 5 ರಂದು ದೆಹಲಿಯಿಂದ ಕಸಿದುಕೊಂಡಿದ್ದನ್ನು ಹಿಂದಕ್ಕೆ ಪಡೆದುಕೊಳ್ಳಬೇಕಾಗಿದೆ ಎಂದು ಹೇಳಿದರು. ನಾನು ಒಂದು ವರ್ಷಕ್ಕೂ ಹೆಚ್ಚು ಸಮಯದ ನಂತರ ಇಂದು ಸ್ವತಂತ್ರಳಾಗಿದ್ದೇನೆ. ಈ ಸಮಯದಲ್ಲಿ ಕಪ್ಪು ದಿನವಾದ ಆಗಸ್ಟ್ 5, 2019ರ ಕಪ್ಪು ನಿರ್ಧಾರವು ಯಾವಾಗಲೂ ನನ್ನ ಹೃದಯ ಮತ್ತು ಆತ್ಮವನ್ನು ನೋಯಿಸುತ್ತದೆ. ಜಮ್ಮು ಮತ್ತು ಕಾಶ್ಮೀರ ಜನರಿಗೆ ಅದೇ ಭಾವನೆ ಇದೆ ಎಂದು ನಾನು ಭಾವಿಸಿದ್ದೇನೆ. ನಮ್ಮಲ್ಲಿ ಯಾರೊಬ್ಬರೂ ಹಗಲು ದರೋಡೆ ಮತ್ತು ಅವಮಾನವನ್ನು ಮರೆಯಲು ಸಾಧ್ಯವಿಲ್ಲ ಎಂದು ಅವರು 1 ನಿಮಿಷ 23 ಸೆಕೆಂಡ್ ಅವಧಿಯ ಆಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.
ದೆಹಲಿ ದರ್ಬಾರ್, ಅಸಂವಿಧಾನಿಕ ಮತ್ತು ಪ್ರಜಾಪ್ರಭುತ್ವ ವಿರೋಧಿಯಾಗಿ ನಮ್ಮಿಂದ ಕಿತ್ತುಕೊಂಡಿದ್ದನ್ನು ಹಿಂದಕ್ಕೆ ತೆಗೆದುಕೊಳ್ಳಬೇಕಾಗಿದೆ ಎಂದು ಈಗ ನಾವೆಲ್ಲರೂ ಪುನರುಚ್ಚರಿಸಬೇಕಾಗಿದೆ ಎಂದು ಮುಫ್ತಿ ಹೇಳಿದರು. 61 ವರ್ಷದ ಮುಫ್ತಿ ಅವರು, ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನಂತರ ಬಿಡುಗಡೆಗೊಳ್ಳುತ್ತಿರುವ ಮುಖ್ಯವಾಹಿನಿಯ ರಾಜಕೀಯ ನಾಯಕರಲ್ಲಿ ಕೊನೆಯವರಾಗಿದ್ದಾರೆ.
ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಲಿದ್ದಾರೆ ಎಂದು ಅವರ ಪಕ್ಷದ ಮುಖಂಡರು ತಿಳಿಸಿದ್ದಾರೆ. ಕಾಶ್ಮೀರ ಸಮಸ್ಯೆಯ ಪರಿಹಾರಕ್ಕಾಗಿ ನಮ್ಮ ಹೋರಾಟವನ್ನು ನಾವು ಮುಂದುವರಿಸಬೇಕಾಗಿದೆ, ಇದಕ್ಕಾಗಿ ಸಾವಿರಾರು ಜನರು ತಮ್ಮ ಪ್ರಾಣವನ್ನು ನೀಡಿದ್ದಾರೆ. ಈ ಮಾರ್ಗವು ಸುಲಭವಲ್ಲ ಎಂದು ನಾನು ಒಪ್ಪುತ್ತೇನೆ, ಆದರೆ ನಮ್ಮ ಸಂಕಲ್ಪವು ಇದಕ್ಕೆ ನೆರವಾಗಲಿದೆ ಎಂದು ನಾನು ಭಾವಿಸುತ್ತೇನೆ, ಎಂದು ಅವರು ಹೇಳಿದರು.
ತನ್ನಂತೆ ಜೈಲಿನಲ್ಲಿದ್ದ ಎಲ್ಲರನ್ನೂ ಬಿಡುಗಡೆ ಮಾಡಬೇಕೆಂದು ಅವರು ಒತ್ತಾಯಿಸಿದರು. “ಈಗ ನನ್ನನ್ನು ಬಿಡುಗಡೆ ಮಾಡಲಾಗಿದೆ, ದೇಶದ ವಿವಿಧ ಕಾರಾಗೃಹ, ಜೈಲಿನಲ್ಲಿರುವ ಜಮ್ಮು ಮತ್ತು ಕಾಶ್ಮೀರದ ಜನರನ್ನು ಬಿಡುಗಡೆ ಮಾಡಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ಅವರು ಹೇಳಿದರು.
