ವರದಿಗಾರ (ಅ.9): ಕೇಬಲ್ ಟೆಲಿವಿಷನ್ ನೆಟ್ವರ್ಕ್ (ನಿಯಂತ್ರಣ) ಕಾಯ್ದೆ 1995 ರ ಅಡಿಯಲ್ಲಿ ಕಾರ್ಯಕ್ರಮ ಸಂಹಿತೆಯ 6ನೇ ನಿಯಮವನ್ನು ಎಲ್ಲಾ ಟಿವಿ ಚಾನೆಲ್ ಗಳು ಕಡ್ಡಾಯವಾಗಿ ಪಾಲಿಸಬೇಕೆಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಶುಕ್ರವಾರ ಖಾಸಗಿ ಟೆಲಿವಿಷನ್ ಚಾನೆಲ್ಗಳಿಗೆ ನಿರ್ದೇಶನ ನೀಡಿದೆ.
ಯಾವುದೇ ಕಾರ್ಯಕ್ರಮವು ಅಶ್ಲೀಲ, ಮಾನಹಾನಿಕರ ಅಥವಾ ಉದ್ದೇಶಪೂರ್ವಕ ಮತ್ತು ಸುಳ್ಳು ಪ್ರಚೋದನೆಗಳು ಮತ್ತು ಅರ್ಧ ಸತ್ಯಗಳನ್ನು ಒಳಗೊಂಡಿರಬಾರದು ಎಂಬ ನಿಬಂಧನೆಗಳ ಬಗ್ಗೆ ಸಚಿವಾಲಯ ಆದೇಶದಲ್ಲಿ ತಿಳಿಸಿದೆ.
ಯಾವುದೇ ಕಾರ್ಯಕ್ರಮಗಳಲ್ಲಿ ಯಾವುದೇ ವ್ಯಕ್ತಿ ಅಥವಾ ಗುಂಪುಗಳನ್ನು ಟೀಕಿಸುವುದು, ಅವಮಾನಿಸುವುದು ಅಥವಾ ಅಪಪ್ರಚಾರ ಮಾಡಬಾರದು ಎಂದು ಸೂಚಿಸಿದೆ.
ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ ಡ್ರಗ್ಸ್ ವಿಚಾರದ ತನಿಖೆಗೆ ಸಂಬಂಧಿಸಿದಂತೆ ಮಾನಹಾನಿ ಮಾಡುವಂತಹ ಕಾರ್ಯಕ್ರಮಗಳನ್ನು ಪ್ರಸ್ತಾರ ಮಾಡುತ್ತಿರುವ ಬಗ್ಗೆ ಆರೋಪಿಸಿ ನಟಿ ರಾಕುಲ್ ಪ್ರೀತ್ ಸಿಂಗ್ ದೆಹಲಿ ಹೈ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಡ್ರಗ್ಸ್ ಪ್ರಕರಣದ ವರದಿಗಳಲ್ಲಿ ತಮ್ಮ ಹೆಸರು ಬಳಸದಂತೆ ಮಾಧ್ಯಮಗಳಿಗೆ ಸೂಚನೆ ನೀಡುವಂತೆ ಕೋರ್ಟ್ಗೆ ಮನವಿ ಮಾಡಿದ್ದರು. ಅದರ ಬೆನ್ನಲ್ಲೇ ಸಚಿವಾಲಯ ಈ ಸಲಹೆಗಳನ್ನು ಹೊರಡಿಸಿದೆ.
ಹಿಂದೆಯೂ ಹಲವು ಸಂದರ್ಭಗಳಲ್ಲಿ ಖಾಸಗಿ ಟಿವಿ ಚಾನೆಲ್ಗಳಿಗೆ ಸೂಚನೆಗಳನ್ನು ನೀಡಲಾಗಿದೆ ಎಂದಿರುವ ಸಚಿವಾಲಯ, ಕೇಬಲ್ ಟಿವಿ ಸಂಪರ್ಕ (ನಿಯಂತ್ರಣ) ಕಾಯ್ದೆ, 1995 ಅಡಿಯಲ್ಲಿ ವಿವರಿಸಲಾಗಿರುವ ಕಾರ್ಯಕ್ರಮ ಮತ್ತು ಜಾಹೀರಾತು ಸಂಹಿತೆಗಳಿಗೆ ಬದ್ಧರಾಗಿ ಪ್ರಸಾರ ಮಾಡುವಂತೆ ಹೇಳಿದೆ.
