ವರದಿಗಾರ (ಸೆ.20): ರಾಮ ಜನ್ಮಭೂಮಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ಅನುಸಾರ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಮಸೀದಿ, ಸೌದಿ ಅರೇಬಿಯಾದ ಮಕ್ಕಾದಲ್ಲಿರುವ ಪವಿತ್ರ ಕಅಬಾ ಷರೀಫ್ ಮಾದರಿಯಲ್ಲಿ ಚೌಕ ಆಕಾರದಲ್ಲಿರಲಿದೆ. ಅದಕ್ಕೆ ಯಾವುದೇ ಚಕ್ರವರ್ತಿ ಅಥವಾ ರಾಜನ ಹೆಸರನ್ನು ಇಡಲಾಗುವುದಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ.
“ಧನ್ನಿಪುರ ಗ್ರಾಮದಲ್ಲಿ 15,000 ಚದರ ಅಡಿ ಅಳತೆಯಲ್ಲಿ ಮಸೀದಿಯನ್ನು ನಿರ್ಮಿಸಲಾಗುವುದು. ಇದು ಬಾಬರಿ ಮಸೀದಿಯ ಅಳತೆಯಲ್ಲೇ ಇರಲಿದೆ. ಆದರೆ ಇತರ ಮಸೀದಿಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿರಬಹುದು. ಇದು ಮೆಕ್ಕಾದ ಕಅಬಾ ಷರೀಫ್ ಮಾದರಿಯಲ್ಲಿ ಚೌಕ ಆಕಾರದಲ್ಲಿರಲಿದೆ ಎಂದು ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ (ಐಐಸಿಎಫ್) ಕಾರ್ಯದರ್ಶಿ ಮತ್ತು ವಕ್ತಾರ ಅಥರ್ ಹುಸೇನ್ ಭಾನುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮಸೀದಿಗೆ ಗುಮ್ಮಟಗಳು ಅಥವಾ ಮಿನಾರ್ಗಳು ಇರುವುದಿಲ್ಲವೇ ಎಂಬ ಪ್ರಶ್ನೆಗೆ, ಹುಸೇನ್ ಇರುವ ಸಾಧ್ಯತೆ ಇರಬಹುದು. ವಾಸ್ತುಶಿಲ್ಪಿಗೆ ಸಂಪೂರ್ಣ ಅಧಿಕಾರ ನೀಡಲಾಗುವುದು ಎಂದು ಉತ್ತರಿಸಿದರು.
ಮಸೀದಿಗೆ ಬಾಬರಿ ಮಸೀದಿ ಎಂದು ಹೆಸರಿಡುವುದಿಲ್ಲ. ಮಾತ್ರವಲ್ಲ ಯಾವುದೇ ಅರಸ ಅಥವಾ ಚಕ್ರವರ್ತಿಯ ಹೆಸರನ್ನೂ ಇಡುವುದಿಲ್ಲ. ನನ್ನ ವೈಯಕ್ತಿಕ ಅಭಿಪ್ರಾಯ ಏನೆಂದರೆ, ಈ ಮಸೀದಿಯನ್ನು ‘ಧನ್ನಿಪುರ ಮಸೀದಿ’ ಎಂದು ಕರೆದರೆ ಒಳ್ಳೆಯದು ಎಂದು ಹುಸೇನ್ ಹೇಳಿದರು.
ಟ್ರಸ್ಟ್ ತನ್ನ ಪೋರ್ಟಲ್ ಅನ್ನು ತಯಾರಿಸುತ್ತಿದೆ, ಇದರಿಂದ ಜನರು ಮಸೀದಿ ಮತ್ತು ವಸ್ತುಸಂಗ್ರಹಾಲಯ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ ದೇಣಿಗೆ ನೀಡಬಹುದು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಇಸ್ಲಾಮಿಕ್ ವಿದ್ವಾಂಸರ ಬರಹಗಳು ಈ ಪೋರ್ಟಲ್ನಲ್ಲಿ ಇರಲಿವೆ ಎಂದು ಅವರು ಮಾಹಿತಿ ನೀಡಿದರು.
ಪೋರ್ಟಲ್ನ ಕೆಲವು ಕೆಲಸಗಳು ಇನ್ನೂ ಪೂರ್ಣಗೊಂಡಿಲ್ಲ. ಅದು ಪೂರ್ಣಗೊಂಡ ತಕ್ಷಣ ದೇಣಿಗೆ ನೀಡಬಹುದು ಎಂದು ತಿಳಿಸಿದರು. ಐದು ಎಕರೆ ಜಾಗದಲ್ಲಿ ಮಸೀದಿ ನಿರ್ಮಾಣಕ್ಕಾಗಿ ಉತ್ತರ ಪ್ರದೇಶ ಸುನ್ನಿ ಕೇಂದ್ರ ವಕ್ಫ್ ಮಂಡಳಿ ಈ ಐಐಸಿಎಫ್ ಎಂಬ ಟ್ರಸ್ಟ್ ಅನ್ನು ರಚಿಸಿದೆ.
ಸುಪ್ರೀಂ ಕೋರ್ಟ್ನ ನಿರ್ದೇಶನದ ಮೇರೆಗೆ ಮಸೀದಿ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರವು ಅಯೋಧ್ಯೆಯ ಧನ್ನಿಪುರದಲ್ಲಿ ಐದು ಎಕರೆ ಜಾಗವನ್ನು ಮಂಜೂರು ಮಾಡಿದೆ. ಸುದೀರ್ಘ ಕಾನೂನು ಹೋರಾಟದ ನಂತರ, ಸುಪ್ರೀಂ ಕೋರ್ಟ್ ಕಳೆದ ವರ್ಷ ನವೆಂಬರ್ 9 ರಂದು ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣದ ಪರವಾಗಿ ತೀರ್ಪು ನೀಡಿತ್ತು. ಸುನ್ನಿ ವಕ್ಫ್ ಮಂಡಳಿಗೆ ಪರ್ಯಾಯ ಐದು ಎಕರೆ ಜಾಗವನ್ನು ನೀಡುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಿತ್ತು.
