ವರದಿಗಾರ(ಸೆ.1): ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ನಿಧನಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್)ದ ಮುಖ್ಯಸ್ಥ ಮೋಹನ್ ಭಾಗವತ್ ಸಂತಾಪ ಸೂಚಿಸಿದ್ದು, ಮುಖರ್ಜಿ ಅವರು ಸಂಘದ “ಮಾರ್ಗದರ್ಶಿ”ಯಾಗಿದ್ದರು. ಅವರು ರಾಜಕೀಯ ಅಸ್ಪೃಶ್ಯತೆಯಲ್ಲಿ ನಂಬಿಕೆ ಇಟ್ಟಿರಲಿಲ್ಲ ಎಂದು ಹೇಳಿದ್ದಾರೆ.
ಕುಶಲ ಸಂಸದ, ರಾಷ್ಟ್ರಹಿತ ಎಲ್ಲಕ್ಕಿಂತ ಮಿಗಿಲು ಎನ್ನುವ ಭಾವನೆಯನ್ನು ಜೀವನದಲ್ಲಿಟ್ಟುಕೊಂಡ, ರಾಜಕೀಯ ಅಸ್ಪೃಶ್ಯತೆಯನ್ನು ಮೀರಿದ ಹಾಗೂ ಎಲ್ಲಾ ಪಕ್ಷಗಳಲ್ಲೂ ಸಮಾನವಾಗಿ ಗೌರವಕ್ಕೆ ಪಾತ್ರರಾಗಿದ್ದ ಎಲ್ಲಾ ಪಕ್ಷಗಳಿಂದಲೂ ಸಮ್ಮಾನಿತರಾಗಿದ್ದ, ಮಿತಭಾಷಿಯೂ, ಲೋಕಪ್ರಿಯರೂ ಭಾರತದ ಪೂರ್ವ ರಾಷ್ಟ್ರಪತಿ ಡಾ. ಪ್ರಣಬ್ ಮುಖರ್ಜಿ ತಮ್ಮ ಜೀವನ ಯಾತ್ರೆಯನ್ನು ಮುಗಿಸಿದ್ದಾರೆ. ಭಾರತದ ರಾಜಕೀಯ, ಸಾಮಾಜಿಕ ವಲಯಗಳಲ್ಲಿ ಅವರ ಸಾವಿನಿಂದ ಶೂನ್ಯತೆ ಸೃಷ್ಟಿಯಾಗಿದ್ದು ಅದನ್ನು ಭರಿಸುವುದು ಕಷ್ಟ ಸಾಧ್ಯ. ಸಂಘದ ಬಗ್ಗೆ ತಮಗಿದ್ದ ಪ್ರೇಮ, ಸದ್ಭಾವನೆ ಅಪಾರವಾದುದು. ನಮಗೆ ಅವರು ಮಾರ್ಗದರ್ಶಕರಾಗಿದ್ದರು. ಅವರ ಸಾವಿನಿಂದ ಸಂಘಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಮೋಹನ್ ಭಾಗವತ್ ಶೋಕ ವ್ಯಕ್ತಪಡಿಸಿದ್ದಾರೆ.
ನಾಗ್ಪುರದ ಆರ್ಎಸ್ಎಸ್ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದ ಪ್ರಣಬ್ ಮುಖರ್ಜಿ, ಸಂಘಟನೆಯ ವಾರ್ಷಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದನ್ನು ಇಲ್ಲಿ ಸ್ಮರಿಸಬಹುದು.
