ದೆಹಲಿ ಪೊಲೀಸರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ ಆಮ್ನೆಸ್ಟಿ ಇಂಡಿಯಾ ವರದಿ ಶಿಫಾರಸು ಜಾರಿಗೊಳಿಸಲು ಪಾಪ್ಯುಲರ್ ಫ್ರಂಟ್ ಒತ್ತಾಯ

ವರದಿಗಾರ (ಆ.29): ಕಳೆದ ಫೆಬ್ರವರಿಯಲ್ಲಿ ನಡೆದಿದ್ದ ಈಶಾನ್ಯ ದೆಹಲಿ ಗಲಭೆ ಮತ್ತು ಪೌರತ್ವ ಹೋರಾಟಗಳ ವೇಳೆ ಮಾಡಲಾದ ಮಾನವ ಹಕ್ಕುಗಳ ಉಲ್ಲಂಘನೆ ಕುರಿತ ಆಮ್ನೆಸ್ಟಿ ಇಂಟರ್ ನ್ಯಾಶನಲ್ ಇಂಡಿಯಾ ವರದಿಯ ಪ್ರಕಾರ, ದೆಹಲಿ ಪೊಲೀಸರಲ್ಲಿ ಗಂಭೀರ ಸಮಸ್ಯೆಗಳಿರುವುದನ್ನು ಗಮನಿಸಲಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅಧ್ಯಕ್ಷ ಒಎಂಎ ಸಲಾಂ ಹೇಳಿದ್ದಾರೆ. ಈ ವರದಿಯ ಶಿಫಾರಸುಗಳನ್ವಯ ಕ್ರಮ ಕೈಗೊಳ್ಳುವಂತೆ ಅವರು ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ.
ದೆಹಲಿ ಪೊಲೀಸರು ಜನರಿಗೆ ರಕ್ಷಣೆ ಕೊಡುವ ಬದಲು ಗೂಂಡಾಗಳಂತೆ ವರ್ತಿಸುವುದು, ಒಂದು ವರ್ಗದ ವಿರುದ್ಧ ಪೂರ್ವಾಗ್ರಹ ಮತ್ತು ಪಕ್ಷಪಾತಿಯಾಗಿರುವ ಬಗ್ಗೆ ಪಾಪ್ಯುಲರ್ ಫ್ರಂಟ್ ಹಲವು ಬಾರಿ ಗಮನ ಸೆಳೆದಿದೆ. ಪೊಲೀಸರಿಂದ ಮಾನವ ಹಕ್ಕುಗಳ ವ್ಯಾಪಕ ಉಲ್ಲಂಘನೆ ಮತ್ತು ಗಲಭೆ ನಿಯಂತ್ರಿಸುವಲ್ಲಿ ಅವರ ವೈಫಲ್ಯಗಳ ಬಗ್ಗೆ ಆಮ್ನೆಸ್ಟಿ ಇಂಡಿಯಾ ತನ್ನ ತನಿಖಾ ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಶಾಂತಿಯುತ ಪ್ರಜಾಸತ್ತಾತ್ಮಕ ಹೋರಾಟಗಾರರ ಮೇಲೆ ಹೆಚ್ಚುವರಿ ಪಡೆಗಳನ್ನು ಬಳಸಿಕೊಳ್ಳಲಾಗಿದೆ. ಜಾಮಿಯಾ ಮಿಲ್ಲಿಯಾ ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರವೇಶಿಸಿದ ಪೊಲೀಸರು, ಗ್ರಂಥಾಲಯದ ಒಳಗೂ ವಿದ್ಯಾರ್ಥಿಗಳಿಗೆ ಭೀಕರ ಹಿಂಸೆ ನೀಡಿದ್ದಾರೆ. ಪ್ರತಿಭಟನಕಾರ ನಾಯಕರನ್ನು ಸುಳ್ಳು ಆರೋಪಗಳ ಮೇಲೆ ಬಂಧಿಸಲಾಗಿದೆ ಮತ್ತು ಅವರು ನೀಡಿದ ಕಸ್ಟೋಡಿಯಲ್ ಹಿಂಸಾಚಾರದಿಂದ ಗಂಭೀರ ಗಾಯಗಳೂ ಆಗಿವೆ. ಆದರೆ, ಇದೇ ವೇಳೆ, ಹಿಂದುತ್ವ ನಾಯಕರು ಮತ್ತು ಕಾರ್ಯಕರ್ತರು ಬಹಿರಂಗವಾಗಿ ಹಿಂಸಾಚಾರಕ್ಕೆ ಕರೆ ನೀಡಿದ್ದರೂ ಮತ್ತು ಸತತ ಕಾನೂನು ಉಲ್ಲಂಘನೆಗಳನ್ನು ಮಾಡಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಅವರು ಹೇಳಿದ್ದಾರೆ.
ಗಲಭೆಗಳ ವೇಳೆ ಪೊಲೀಸರು ಕೇವಲ ಮೂಕಪ್ರೇಕ್ಷಕರಾಗಿದ್ದರು. ಜನತೆ ಸಹಾಯಕ್ಕೆ ಯಾಚಿಸಿದಾಗ ಅವರು ಪ್ರತಿಕ್ರಿಯಿಸಿದ್ದು ತುಂಬಾ ಕಡಿಮೆ. ಪೊಲೀಸರೂ ಹಿಂಸಾಚಾರ ಮತ್ತು ಧ್ವಂಸ ಕಾರ್ಯದಲ್ಲಿ ಸಕ್ರಿಯವಾಗಿದ್ದರು ಎಂಬುದರ ಬಗ್ಗೆ ನಿರ್ಲಕ್ಷಿಸಲಾಗದ ಸಾಕ್ಷಿಗಳಿವೆ. ಸಂತ್ರಸ್ತರನ್ನು ಪ್ರತಿನಿಧಿಸುವ ನ್ಯಾಯವಾದಿಗಳಿಗೆ ಬೆದರಿಕೆಗಳನ್ನು ಹಾಕುವ ಮೂಲಕ, ದೆಹಲಿ ಗಲಭೆ ಸಂತ್ರಸ್ತರಿಗೆ ನ್ಯಾಯದಾನಕ್ಕೆ ತಡೆಯೊಡ್ಡಲಾಗುತ್ತಿದೆ ಮತ್ತು ಪೊಲೀಸರು ಪ್ರಕರಣಗಳನ್ನು ನಾಶಪಡಿಸುತ್ತಿದ್ದಾರೆ. ಘಟನೆ ನಡೆದು ತಿಂಗಳುಗಳೇ ಕಳೆದರೂ, ಯಾವೊಬ್ಬ ಅಧಿಕಾರಿಯ ವಿರುದ್ಧ ಕ್ರಮ ಕೈಗೊಂಡಿಲ್ಲ. ಅವರು ಎಷ್ಟೊಂದು ನಿರ್ಭೀತರಾಗಿದ್ದಾರೆ ಎಂಬುದು ಇದರಿಂದಲೇ ತಿಳಿಯುತ್ತದೆ ಎಂದು ಸಲಾಂ ತಿಳಿಸಿದ್ದಾರೆ.
ಮಾನವ ಹಕ್ಕುಗಳ ಉಲ್ಲಂಘನೆಯ ನಿಷ್ಪಕ್ಷಪಾತ ತನಿಖೆ, ಹಿಂಸಾಚಾರದಲ್ಲಿ ಪೊಲೀಸರ ಪಾತ್ರದ ಕುರಿತ ತನಿಖೆ, ಪೊಲೀಸ್ ಪಡೆಯಲ್ಲಿ ಸುಧಾರಣೆಗಳನ್ನು ತರುವ ಕುರಿತ ಆಮ್ನೆಸ್ಟಿ ಇಂಡಿಯಾದ ಶಿಫಾರಸುಗಳನ್ನು ಪಾಪ್ಯುಲರ್ ಫ್ರಂಟ್ ಸ್ವಾಗತಿಸುತ್ತದೆ. ಆಮ್ನೆಸ್ಟಿ ಇಂಟರ್ ನ್ಯಾಶನಲ್ ಇಂಡಿಯಾದ ವರದಿಯನ್ನು ಕೇಂದ್ರ ಸರಕಾರ ಪಡೆದು, ಅದರ ಶಿಫಾರಸುಗಳನ್ನು ಜಾರಿಗೊಳಿಸಲು ಗಂಭೀರ ಕ್ರಮಗಳನ್ನು ಕೈಗೊಳ್ಳುವಂತೆ ಪಾಪ್ಯುಲರ್ ಫ್ರಂಟ್ ಒತ್ತಾಯಿಸುತ್ತದೆ ಎಂದು ಒಎಂಎ ಸಲಾಂ ಹೇಳಿದ್ದಾರೆ.
