ಡಿಜೆ ಹಳ್ಳಿ ಗಲಭೆಯಲ್ಲೂ ಗಾಂಜಾ ಪ್ರಭಾವ; ಬೆಂಗಳೂರು ಕಮಿಷನರ್ ಕಮಲ್ಪಂತ್

ವರದಿಗಾರ (ಆ.27): ಸಿಸಿಬಿ ಪೊಲೀಸರು ಗಾಂಜಾ ಜಾಲ ಭೇದಿಸಿ, 1 ಕೋಟಿ ರೂ. ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದು, ಕಳೆದ ಹದಿನೈದು ದಿನಗಳ ಹಿಂದೆ ನಡೆದಿದ್ದ ಬೆಂಗಳೂರಿನ ಗಲಭೆಯಲ್ಲೂ ಈ ಗೋದಾವರಿ ಗಾಂಜಾ ಬಳಕೆ ಆಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಂಧ್ರಪ್ರದೇಶದ ಈಸ್ಟ್ ಗೋದಾವರಿ ಜಿಲ್ಲೆಯಿಂದ ಗಾಂಜಾವನ್ನು ತಂದು ಅಂತರ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಗಾಂಜಾ ಮಾರಾಟ ಆರೋಪದಡಿ ಮೈಸೂರಿನ ಕೆ.ಆರ್.ಪುರದ ಮೂವರನ್ನು ಬಂಧಿಸಲಾಗಿದ್ದು, ಇವರು ಹಲವು ವರ್ಷಗಳಿಂದ ಗಾಂಜಾ ಮಾರಾಟ, ಸರಬರಾಜಿನಲ್ಲಿ ತೊಡಗಿದ್ದರು ಎಂದರು.
ಬಂಧಿತ ಆರೋಪಿ ಸಮೀರ್, ಚಾಲಕನಾಗಿದ್ದು, ಈಸ್ಟ್ ಗೋದಾವರಿ ಜಿಲ್ಲೆಯಿಂದ ಲಾರಿಯಲ್ಲಿ ಗಾಂಜಾ ಸಾಗಣೆ ಮಾಡುವ ಹೊಣೆ ಆತನ ಮೇಲಿತ್ತು. ಸಹಚರರಾದ ಕೈಸರ್ ಪಾಷಾ ಹಾಗೂ ಇಸ್ಮಾಯಿಲ್ ಮೂಲಕ ಮಧ್ಯವರ್ತಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದನು ಎಂದು ಮಾಹಿತಿ ನೀಡಿದರು.
ರಾಜ್ಯದ ಹಲವೆಡೆ ಪೆಡ್ಲರ್ ಮೂಲಕ ಗಾಂಜಾ ಮಾರಿಸುತ್ತಿದ್ದ ಇವರು ತಮಿಳುನಾಡು, ಕೇರಳ ರಾಜ್ಯದಲ್ಲೂ ಗಾಂಜಾ ಮಾರಾಟ ಮಾಡುತ್ತಿದ್ದರು ಎಂದು ಎಂದು ಅವರು ತಿಳಿಸಿದರು.
