
ವರದಿಗಾರ (ಜು.20): ಕರ್ನಾಟಕ ರಾಜ್ಯದ ಸಮ್ಮಿಶ್ರ ಸರಕಾರದಲ್ಲಿ ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಕುದುರೆ ವ್ಯಾಪಾರ ಇನ್ನೂ ಮುಂದುವರಿದಿದ್ದು, ಇದರ ಭಾಗವೆಂಬಂತೆ ಬಿಜೆಪಿಯ ಆಪರೇಶನ್ ಕಮಲದ ಮೂಲಕ ರಾಜ್ಯ ಸಚಿವರೊಬ್ಬರಿಗೆ ಬಂಪರ್ ಆಫರ್ ನೀಡಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಕಾಂಗ್ರೆಸ್ ಶಾಸಕ ಹಾಗೂ ಹಾಲಿ ಸಚಿವ ರಹೀಂ ಖಾನ್ ಅವರಿಗೆ ಬಿಜೆಪಿಯಿಂದ ಭರ್ಜರಿ ಆಫರ್ ಬಂದಿದೆ ಎಂದು ಹೇಳಲಾಗುತ್ತಿದೆ. ಇಂದು ಬೆಳಗ್ಗೆ ರಹೀಂ ಖಾನ್ ಅವರು ತಾಜ್ ಹೋಟೆಲ್ನಲ್ಲಿರುವ ಸಂದರ್ಭ ಅವರಿಗೆ ಯಡಿಯೂರಪ್ಪ ಅವರ ಆಪ್ತರೊಬ್ಬರು ಕರೆ ಮಾಡಿ ನಮ್ಮ ಪಕ್ಷ ಸೇರುವಂತೆ ಆಹ್ವಾನಿಸಿದ್ದು, 30 ಕೋ.ರೂ. ನೀಡುವ ಆಮಿಷ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ.
”ನಮ್ಮ ಪಕ್ಷಕ್ಕೆ ಬಂದಲ್ಲಿ ನೀವು ರಾಜ್ಯ ಬಿಜೆಪಿಯಲ್ಲಿ ಮೊದಲ ಮುಸ್ಲಿಂ ಮಂತ್ರಿಯಾಗುತ್ತೀರಿ. ಉತ್ತರ ಕರ್ನಾಟಕದಲ್ಲಿ ನಿಮ್ಮನ್ನು ಪ್ರಭಾವಿ ಮುಸ್ಲಿಂ ನಾಯಕರಾಗಿ ನಾವು ಬೆಳೆಸುತ್ತೇವೆ” ಎಂದು ಕರೆ ಮಾಡಿರುವ ಪ್ರಭಾವಿ ಬಿಜೆಪಿ ನಾಯಕಿ ಭರವಸೆ ಕೂಡಾ ನೀಡಿದ್ದಾರೆ ಎಂಬ ಆರೋಪ ಇದೀಗ ಕೇಳಿಬಂದಿದ್ದು ಇದರ ಸತ್ಯಾಸತ್ಯತೆ ಇನ್ನಷ್ಟೇ ಹೊರಬರಬೇಕಿದೆ.
