
ವರದಿಗಾರ (ಜುಲೈ 04): ‘ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಸಂಘಪರಿವಾರದ ಶಕ್ತಿ ಕೇಂದ್ರವೆಂದೇ ಗುರುತಿಸಲ್ಪಟ್ಟಿರುವ ವಿವೇಕಾನಂದ ಕಾಲೇಜಿನ ದಲಿತ ವಿದ್ಯಾರ್ಥಿನಿಯ ಮೇಲೆ ಅದೇ ಕಾಲೇಜಿನ ಎಬಿವಿಪಿ ಕಾರ್ಯಕರ್ತರೆನ್ನಲಾದ ಐವರು ಸಾಮೂಹಿಕವಾಗಿ ಅತ್ಯಾಚಾರವೆಸಗಿ, ಅದನ್ನು ವೀಡಿಯೋ ಚಿತ್ರೀಕರಣದ ಮೂಲಕ ಸೆರೆಹಿಡಿದು ನಿರಂತರವಾಗಿ ಬೆದರಿಕೆಯೊಡ್ಡಿದ್ದಲ್ಲದೆ ಬುಧವಾರ ವೀಡಿಯೋವನ್ನು ಸಾಮಾಜಿಕ ತಾಣದಲ್ಲಿ ಹರಿಬಿಟ್ಟು ವಿಕೃತಿ ಪಡೆದ ಘಟನೆಯು ದಲಿತರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯಕ್ಕೆ ಮತ್ತೊಂದು ಉದಾಹರಣೆಯಾಗಿದೆ’ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್.ಡಿ.ಪಿ.ಐ ಕರ್ನಾಟಕ ರಾಜ್ಯ ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ ಹೇಳಿದ್ದು, ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ದಲಿತರ ಮೇಲೆ ಇಂತಹ ಅಮಾನವೀಯ ಘಟನೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಆರೋಪಿಗಳಿಗೆ ಗಲ್ಲು ಶಿಕ್ಷೆಯನ್ನು ವಿಧಿಸುವ ಮೂಲಕ ಇಂತಹ ಪೈಶಾಚಿಕ ಕೃತ್ಯಗಳಿಗೆ ಅಂತ್ಯ ಹಾಡಬೇಕಾಗಿದೆ ಎಂದು ಅವರು ಹೇಳಿದ್ದಾರೆ. ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸುವಂತೆಯೂ ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಬಂಧಿತ ಆರೋಪಿಗಳು
ನಾಗರಿಕ ಸಮಾಜಕ್ಕೆ ಅವಮಾನ: ಎಸ್ಡಿಪಿಐ
ಬೆಂಗಳೂರು: ಪುತ್ತೂರಿನಲ್ಲಿ ದಲಿತ ವಿದ್ಯಾರ್ಥಿನಿಯ ಮೇಲೆ ನಡೆದ ಸಮೂಹಿಕ ಅತ್ಯಾಚಾರ ಪ್ರಕರಣ ನಾಗರಿಕ ಸಮಾಜಕ್ಕೆ ಅತ್ಯಂತ ಅವಮಾನಕಾರಿಯಾಗಿದ್ದು, ಸಮಾಜದಲ್ಲಿ ಕ್ರೌರ್ಯ, ಶೋಷಣೆ, ಸ್ತ್ರೀ ಹಿಂಸೆ, ಪೀಡನೆ ಎಷ್ಟೊಂದು ಹೀನವಾಗಿ ಹಾಗೂ ಗಾಢವಾಗಿ ಬೇರೂರುತ್ತಿದೆ ಎಂಬುವುದಕ್ಕೆ ಸಾಕ್ಷಿಯಾಗಿದೆ. ನಾಗರಿಕ ಸಮಾಜವು ತಲೆ ತಗ್ಗಿಸಿ ನಡೆಯುವಂತಹ ಇಂತಹ ಘಟನೆಯನ್ನು ಎಸ್ಡಿಪಿಐ ಕಟು ಶಬ್ದಗಳಲ್ಲಿ ಖಂಡಿಸುತ್ತದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್.ಡಿ.ಪಿ.ಐ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಹೇಳಿದ್ದಾರೆ.
ದಲಿತ ಸಮುದಾಯದ ಹೆಣ್ಣು ಮಗಳನ್ನು ಬಹಳ ಚಾಣಾಕ್ಷತನದಿಂದ ತಮ್ಮ ಬಲೆಗಳಲ್ಲಿ ಕೆಡವಿರುವ ದುಷ್ಕರ್ಮಿಗಳು ಆ ಹೆಣ್ಣು ಮಗಳ ಮತ್ತು ಆಕೆಯ ಕುಟುಂಬದ ಜೀವನ ಹಾಗೂ ಭವಿಷ್ಯಕ್ಕೆ ಕಂಟಕವಾಗಿದ್ದಾರೆ. ದೇಶದಾದ್ಯಂತ ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಲೇ ಇದೆ. ದಲಿತ ಮಹಿಳೆಯರನ್ನು ಬೆತ್ತಲೆಯಾಗಿಸಿ ಮೆರವಣಿಗೆ ಮಾಡುವುದು, ಥಳಿಸುವುದು, ದಲಿತರ ಮನೆಗಳನ್ನು ಸುಡುವುದು ನಿತ್ಯದ ಸುದ್ದಿಯಾಗಿಬಿಟ್ಟಿದೆ. ರಾಜಸ್ತಾನ, ಉತ್ತರ ಪ್ರದೇಶ, ಗುಜರಾತ್, ಮಧ್ಯಪ್ರದೇಶ ಮುಂತಾದ ರಾಜ್ಯಗಳಲ್ಲಿ ದಲಿತ ಯುವಕರು ಮೀಸೆ ಬಿಟ್ಟಿದ್ದಕ್ಕೆ, ಜೀನ್ಸ್ ಹಾಕಿದ್ದಕ್ಕೆ, ಮದುಮಗ ಕುದುರೆಯಲ್ಲಿ ಸಾಗಿದ್ದಕ್ಕೆ ದಾಳಿಯಾಗಿದ್ದು ಅಥವಾ ಹತ್ಯೆಗೈದ ಪ್ರಕರಣಗಳು ಕೂಡಾ ಕೇಳುತ್ತಿದ್ದೇವೆ.
ಪ್ರಜಾಪ್ರಭುತ್ವ ಸರಕಾರ ಬಂದು 70 ವರ್ಷಗಳು ಕಳೆದರೂ ದೇಶದಲ್ಲಿ ನಡೆಯುವ ಇಂತಹ ಭೀಕರ ಘಟನೆಗಳು ಈ ದೇಶದ ಜಾತಿ ವ್ಯವಸ್ಥೆ ಹಾಗೂ ತಾರತಮ್ಯ ಹಿಂಸಾ ಪ್ರವೃತ್ತಿಗೆ ಕನ್ನಡಿಯಾಗಿದೆ. ಅಲ್ಲದೆ ದೇಶದಾದ್ಯಂತ ನಡೆಯುವ ‘ಲಿಂಚಿಂಗ್’ ಘಟನೆಗಳಲ್ಲಿ ಮುಸ್ಲಿಂ ಯುವಕರನ್ನು ಹತ್ಯೆಗೈಯ್ಯುತ್ತಿರುವುದು ಅತ್ಯಂತ ಸಾಮಾನ್ಯವಾಗಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಬಂದ ಬಳಿಕ ಇಂತಹ ನೂರಾರು ಭೀಕರ ಘಟನೆಗಳು ಎಗ್ಗಿಲ್ಲದೆ ನಡೆಯುತ್ತಿದ್ದು, ಕೇಂದ್ರ ಸರಕಾರವಾಗಲಿ, ವಿವಿಧ ರಾಜ್ಯಗಳಲ್ಲಿರುವ ಬಿಜೆಪಿ ಸರಕಾರವಾಗಲಿ ಯವುದೇ ಆತಂಕ ವ್ಯಕ್ತಪಡಿಸದೇ ಇರುವುದು ಅತ್ಯಂತ ಖೇದÀಕರವಾಗಿದೆ. ಸರಕಾರ ಕಿಂಚಿತ್ತೂ ಕ್ರಮ ಕೈಗೊಳ್ಳದೆ ಕೊಲೆಗಡುಕರಿಗೆ ಮೌನ ಸಮ್ಮತ ನೀಡುತ್ತಿದೆ.
ದಲಿತ ಮತ್ತು ಮುಸ್ಲಿಂ ಸಮುದಾಯದ ಸಹನೆಯನ್ನು ಪರೀಕ್ಷಿಸುತ್ತಿರುವ ಸರಕಾರಗಳು ಹಾಗೂ ಸವರ್ಣಿಯರ ವಿರುದ್ಧ ಬಹುಜನ ಸಮಾಜ ಎಚ್ಚೆತ್ತುಕೊಂಡು ಪ್ರತಿರೋಧ ತೋರುವ ಅಗತ್ಯ ಪ್ರಸ್ತುತ ಅತ್ಯಂತ ಉದ್ಭವಿಸಿದೆ ಎಂದು ರಿಯಾಝ್ ಫರಂಗಿಪೇಟೆ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
‘ಆರೋಪಿಗಳು ಎಬಿವಿಪಿ ಕಾರ್ಯಕರ್ತರಲ್ಲವೆಂದು ಕೈ ತೊಳೆದುಕೊಂಡ ಎಬಿವಿಪಿ’
‘ಘಟನೆಗೆ ಸಂಬಂಧಿಸಿ ಇದೀಗಾಗಲೇ ಬಂಧನಕ್ಕೊಳಗಾಗಿರುವ ಐವರು ಆರೋಪಿಗಳು ಎಬಿವಿಪಿ ಕಾರ್ಯಕರ್ತರು ಎನ್ನಲಾಗಿದ್ದು, ಸಾಮಾಜಿಕ ತಾಣಗಳಲ್ಲಿ ಹಾಗೂ ವಿವಿಧ ಮಾಧ್ಯಮಗಳಲ್ಲಿ ಫೋಟೋ ಸಹಿತಿ ವರದಿಯಾಗಿದೆ. ಅದಲ್ಲದೆ ದಕ್ಷಿಣ ಕನ್ನಡದ ವಿವಿಧ ಬಿಜೆಪಿ ಶಾಸಕರ ಜೊತೆಯಿರುವ ಫೋಟೋ ಕೂಡಾ ಸಾಮಾಜಿಕ ತಾಣದಲ್ಲಿ ಬಳಸಲಾಗಿದೆ. ಘಟನೆಗೆ ಸಂಬಂಧಿಸಿ ಪ್ರಕರಣೆ ಹೊರಡಿಸಿರುವ ಎಬಿವಿಪಿ ಪುತ್ತೂರು ಘಟಕವು ಎಬಿವಿಪಿ ಹಾಗೂ ಅತ್ಯಾಚಾರದ ಆರೋಪಿಗಳಿಗೆ ಯಾವುದೇ ಸಂಬಂಧವಿಲ್ಲವೆಂದು ಹೇಳಿ ಕೈ ತೊಳೆದುಕೊಂಡಿದೆ’.
