
‘ವಿಶ್ವವನ್ನೆಲ್ಲಾ ಸುತ್ತಿದ ಮೋದಿಗೆ ದೇಶದ ರೈತರನ್ನು ಮಾತನಾಡಿಸಲು ಸಮಯವೇ ಸಿಕ್ಕಿಲ್ಲ’
ವರದಿಗಾರ (ಮೇ 17): 56 ಇಂಚಿನ ಎದೆ ಇದೆ ಎಂದು ಹೇಳಿಕೊಳ್ಳುತ್ತಿರುವ ಮೋದಿಯವರೇ ನಿಮಗೆ ಹೃದಯವೆಲ್ಲಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯು ಪ್ರಧಾನಿ ಮೋದಿನ್ನು ಪ್ರಶ್ನಿಸಿದ್ದಾರೆ.
ಅವರು ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುಪ್ರಿಯಾ ಶ್ರಿನಾಟೆ ಪರ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ‘ರಾಷ್ಟ್ರೀಯತೆ ಬಗ್ಗೆ ಮಾತನಾಡುವಾಗಲೆಲ್ಲ ಮೋದಿ ಪಾಕಿಸ್ತಾನದ ಬಗ್ಗೆ ಮಾತನಾಡುತ್ತಾರೆ. ಅವರಿಗೆ ರಾಷ್ಟ್ರೀಯತೆ ಎಂದರೆ ಪಾಕಿಸ್ತಾನದ ವಿರುದ್ಧ ಅವರು ಮಾಡಿದ ಕೆಲಸಗಳ ಬಗ್ಗೆ ಮಾತನಾಡುವುದು. ಉದ್ಯೋಗ, ರೈತರ ಸಮಸ್ಯೆಗಳು ಅವರಿಗೆ ರಾಷ್ಟ್ರೀಯತೆ ಅಲ್ಲ”. ಕೇವಲ ಮಾರಾಟ ತಂತ್ರಗಳ ಬಗ್ಗೆ ಮಾತ್ರ ಗಮನ ಹರಿಸಿರುವ ಮೋದಿ ಸೊಕ್ಕಿನ ವ್ಯಕ್ತಿ ಎಂದು ಪ್ರಿಯಾಂಕ ಟೀಕಿಸಿದ್ದಾರೆ.
ಮೋದಿಯವರನ್ನು ರೈತ ವಿರೋಧಿ ಎಂದು ಬಣ್ಣಿಸಿದ ಅವರು, “ಕಳೆದ ಐದು ವರ್ಷಗಳಲ್ಲಿ ವಿಶ್ವದ ಎಲ್ಲ ಕಡೆಗಳಿಗೂ ಮೋದಿ ಭೇಟಿ ನೀಡಿದರು. ಆದರೆ ತಮ್ಮದೇ ದೇಶದ ರೈತರನ್ನು ಭೇಟಿ ಮಾಡುವ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ” ಎಂದು ಹೇಳಿದರು. ರೈತ ಸಮ್ಮಾನ್ ಯೋಜನೆಯಡಿ ರೈತ ಕುಟುಂಬಗಳಿಗೆ ವಾರ್ಷಿಕ ಆರು ಸಾವಿರ ರೂ. ನೀಡುವ ಕ್ರಮದ ಬಗ್ಗೆ ಪ್ರಶ್ನಿಸಿದ ಅವರು, “ಈ ಯೋಜನೆ ರೈತರಿಗೆ ಅವಮಾನ; ಐದು ಮಂದಿ ಇರುವ ರೈತರ ಕುಟುಂಬದಲ್ಲಿ ಪ್ರತಿಯೊಬ್ಬರಿಗೆ ದಿನಕ್ಕೆ ಎರಡು ರೂಪಾಯಿ ಸಿಕ್ಕಂತಾಗುತ್ತದೆ” ಎಂದು ಹೇಳಿದ್ದಾರೆ.
ಇದರ ಬದಲಾಗಿ ಕಾಂಗ್ರೆಸ್ ಪಕ್ಷ ಎಲ್ಲ ಬಡಕುಟುಂಬಗಳಿಗೆ ವರ್ಷಕ್ಕೆ 72 ಸಾವಿರ ರೂಪಾಯಿ ನೀಡುವ ನ್ಯಾಯ್ ಯೋಜನೆ ಘೋಷಿಸಿರುವುದನ್ನು ಪ್ರಿಯಾಂಕಾ ಉಲ್ಲೇಖಿಸಿದ್ದಾರೆ.
